ಗುಂಡ್ಲುಪೇಟೆ: ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಕ್ರಮವಾಗಿ ಜಿಲ್ಲಾಧಿಕಾರಿ ಅವರ ಆದೇಶದ ಅನ್ವಯ ಒಂದು ವಾರದ ಕಾಲ ಬಂಡೀಪುರ ಸಫಾರಿ ಕ್ಯಾಂಪ್ ಹಾಗೂ ರೆಸಾರ್ಟ್ಗಳು ಮುಚ್ಚಿರುವುದರಿಂದ ಬಂಡೀಪುರ ಕ್ಯಾಂಪಸ್ ಹಾಗೂ ರೆಸಾರ್ಟ್ಗಳು ಭಾನುವಾರ ಬಿಕೋ ಎನ್ನುತ್ತಿದ್ದವು.
ರೆಸಾರ್ಟ್ಗಳು ಹಾಗೂ ಐಷಾರಾಮಿ ಹೋಟೆಲ್ಗಳಿಗೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರವಾಸಿಗರನ್ನು ವಾಪಸ್ ಕಳುಹಿಸಿದರು. ಇತ್ತ ಸಫಾರಿ ಕ್ಯಾಂಪ್ನತ್ತ ಬಂದ ಪ್ರವಾಸಿಗರು ವಿದೇಶಿಯರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ಕಳುಹಿಸಿದರು.
ಗೋಪಾಲಸ್ವಾಮಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರು: ಸಫಾರಿ ರದ್ದಾದ ಕಾರಣ ಸಫಾರಿಗೆ ಬಂದಿದ್ದ ಪ್ರವಾಸಿರೆಲ್ಲ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿ ಬಂದರು. ಭಾನುವಾರ ಬೆಟ್ಟಕ್ಕೆ ನಾಲ್ಕು ಬಸ್ ಸಂಚರಿಸಿತು. ಇಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಇರಲಿಲ್ಲ.
‘ಜನರು ಹೆಚ್ಚಾಗಿ ಬರುವ ಎಲ್ಲಾ ಪ್ರವಾಸಿ ಸ್ಥಳಗಳಿಗೆ ನಿರ್ಬಂಧ ಹೇರಬೇಕು. ಜಿಲ್ಲಾಡಳಿತ ಆದೇಶ ಹೊರಡಿಸಿದರೂ ಇಲ್ಲಿನ ತಾಲ್ಲೂಕು ಆಡಳಿತ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದೆ ಎಂದು ಸ್ಥಳೀಯ ಕುಣಗಳ್ಳಿ ಗ್ರಾಮಸ್ಥರು ಹೇಳಿದರು.
ಗೋಪಾಲಸ್ವಾಮಿ ಬೆಟ್ಟಕ್ಕೆ ಜನರು ಹೆಚ್ಚಾಗಿ ಬರುತ್ತಿದ್ದರು ಸಹ ಇಲ್ಲಿನ ಅವರಿ ಸೋಂಕಿನ ಬಗ್ಗೆ ಅರಿವು ಮೂಡಿಸಲು ಅಥವಾ ನಿಗಾ ವಹಿಸಲು ಒಬ್ಬ ಸಿಬ್ಬಂದಿಯೂ ಇಲ್ಲ. ತಾಲ್ಲೂಕಿನ ಪ್ರವಾಸಿ ಸ್ಥಳಗಳಿಗೆ ಬಂದವರೆಲ್ಲ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುತ್ತಿದ್ದರು. ಜಿಲ್ಲಾಡಳಿತ ಆದೇಶದಂತೆ ಜನರು ಬರುವುದಿಲ್ಲ ಎಂದು ತಿಳಿದುಕೊಂಡಿದ್ದೇವು. ಆದರೆ ಎಂದಿನಂತೆ ಜನರ ಓಡಾಟ ಇತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದರು.
ಈ ಬಗ್ಗೆ ತಹಸೀಲ್ದಾರ್ ಮಾತನಾಡಿ, ಜಾತ್ರೆಯನ್ನು ಮಾತ್ರ ರದ್ದು ಮಾಡಲಾಗಿದೆ. ಉಳಿದಂತೆ ಹೋಗಿ ಪೂಜೆ ಮಾಡಿಸಿಕೊಂಡು ಬರಬಹುದು ಯಾವುದೇ ತೊಂದರೆ ಇಲ್ಲ ಎಂದು ಪ್ರಜಾವಾಣಿ ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.