ADVERTISEMENT

ಚಾಮರಾಜನಗರ | ಕೋವಿಡ್‌ಗೆ ಮಹಿಳೆ ಸಾವು, ಮೃತರ ಸಂಖ್ಯೆ 6ಕ್ಕೆ

600ರ ಗಡಿ ದಾಟಿದ ಪ್ರಕರಣ: 33 ಮಂದಿಗೆ ಸೋಂಕು ದೃಢ, 37 ಜನರು ಗುಣಮುಖ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 15:17 IST
Last Updated 30 ಜುಲೈ 2020, 15:17 IST
ಕೋವಿಡ್‌ನಿಂದಾಗಿ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರವನ್ನು ಪಿಎಫ್‌ಐನ ಸ್ವಯಂಸೇವಕರು ನೆರವೇರಿಸಿದರು
ಕೋವಿಡ್‌ನಿಂದಾಗಿ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರವನ್ನು ಪಿಎಫ್‌ಐನ ಸ್ವಯಂಸೇವಕರು ನೆರವೇರಿಸಿದರು   

ಚಾಮರಾಜನಗರ: ಕೋವಿಡ್‌–19ನಿಂದಾಗಿ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದೆ. ಒಬ್ಬರಲ್ಲಿ ಸೋಂಕು ದೃಢಪಟ್ಟಿದ್ದರೂ, ಕೋವಿಡ್‌ಯೇತರ ಕಾರಣದಿಂದ ಅವರು ಕೊನೆಯುಸಿರೆಳೆದಿದ್ದಾರೆ.

ಮೃತಪಟ್ಟವರು ಚಾಮರಾಜನಗರ ತಾಲ್ಲೂಕಿನ ಜಾಲಹಳ್ಳಿ ಹುಂಡಿಯ 48 ವರ್ಷದ ಮಹಿಳೆ (ರೋಗಿ ಸಂಖ್ಯೆ 1,03,179). ಜುಲೈ 26ರಂದು ಇವರು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ರಾತ್ರಿ 10.30ರ ಸುಮಾರಿಗೆ ಮೃತಪಟ್ಟಿದ್ದಾರೆ.

ಸರ್ಕಾರದ ಶಿಷ್ಟಾಚಾರದಂತೆ, ಯಡಬೆಟ್ಟದ ಬಳಿ ಗುರುತಿಸಲಾಗಿರುವ ಜಮೀನಿನಲ್ಲಿ ಪಿಎಫ್‌ಐ ಸ್ವಯಂ ಸೇವಕರು ಅಂತ್ಯ ಸಂಸ್ಕಾರ ನೆರವೇರಿಸಿದರು. ಮಹಿಳೆಯ ಕುಟುಂಬದ ಐವರು ಸದಸ್ಯರು ದೂರದಲ್ಲಿ ನಿಂತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ADVERTISEMENT

ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 33 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದೆ. 37 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 624ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 406ಕ್ಕೆ ತಲುಪಿದೆ. 211 ಸಕ್ರಿಯ ಪ್ರಕರಣಗಳಿದ್ದು, ಐವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ಜಿಲ್ಲೆಯಲ್ಲಿ ಒಟ್ಟು 598 ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 56 ಪರೀಕ್ಷೆಗಳನ್ನು ಆರ್‌ಟಿಪಿಸಿಆರ್‌ ಪ್ರಯೋಗಾಲಯದಲ್ಲಿ ನಡೆಸಲಾಗಿದೆ. ಇದರಲ್ಲಿ ಆರು ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ ಮೂಲಕ 542 ಪರೀಕ್ಷೆ ನಡೆಸಲಾಗಿದ್ದು, 27 ಮಂದಿಗೆ ಕೋವಿಡ್‌–19 ಇರುವುದು ಖಚಿತವಾಗಿದೆ. 565 ಮಂದಿಯ ವರದಿಗಳು ನೆಗೆಟಿವ್‌ ಬಂದಿವೆ.

33 ಪ್ರಕರಣಗಳ, ಪೈಕಿ ಕೊಳ್ಳೇಗಾಲ ತಾಲ್ಲೂಕಿನಲ್ಲೇ 18 ಪ್ರಕರಣಗಳು ವರದಿಯಾಗಿವೆ. ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ತಲಾ ಐವರಿಗೆ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಾಲ್ವರಿಗೆ ಹಾಗೂ ಹನೂರು ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

33 ಮಂದಿಯಲ್ಲಿ ಸೋಂಕಿತರ ಸಂಪರ್ಕಿತರು 19 ಮಂದಿ ಐಎಲ್‌ಐ ರೋಗ ಲಕ್ಷಣ ಹೊಂದಿರುವ ಒಂಬತ್ತು ಮಂದಿ ಮೈಸೂರಿನಿಂದ ಬಂದ ಇಬ್ಬರು, ಬೆಂಗಳೂರು ಹಾಗೂ ಮಂಗಳೂರಿನಿಂದ ಬಂದ ತಲಾ ಒಬ್ಬರು ಇದ್ದಾರೆ. ಇನ್ನೊಬ್ಬರ ಸೋಂಕಿನ ಮೂಲ ಗೊತ್ತಾಗಿಲ್ಲ.

ಗುಣಮುಖರಾದ 37 ಜನರಲ್ಲಿ ಒಬ್ಬರು ಮೈಸೂರು ಜಿಲ್ಲೆಯ ತಿ.ನರಸೀಪುರದವರು. ಕೊಳ್ಳೇಗಾಲ ತಾಲ್ಲೂಕಿನ 19 ಜನರು, ಗುಂಡ್ಲುಪೇಟೆ ತಾಲ್ಲೂಕಿನ ಎಂಟು ಮಂದಿ, ಚಾಮರಾಜನಗರ ತಾಲ್ಲೂಕಿನ ಐವರು ಮತ್ತು ಯಳಂದೂರಿನ ನಾಲ್ವರು ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದಾರೆ.

ಲೋಕಾಯುಕ್ತ ಕಚೇರಿ ಸೀಲ್‌ ಡೌನ್‌:ಚಾಮರಾಜನಗರದ ಲೋಕಾಯುಕ್ತ ಪೊಲೀಸ್‌ ಕಚೇರಿಯ ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢಪಟ್ಟ ಕಾರಣದಿಂದ ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.