ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅನುಮತಿ ಕೋರಿ ಕೇರಳ ರಾಜ್ಯದ ಒತ್ತಡ ಹೆಚ್ಚುತ್ತಿರುವಾಗಲೇ, ಇಲ್ಲಿನ ಪರಿಸರವಾದಿಗಳು ಹೋರಾಟದ ಹಾದಿ ಹಿಡಿದಿದ್ದು ಏ.6ರಂದು ‘ನಮ್ಮ ನಡಿಗೆ ಬಂಡೀಪುರದೆಡೆಗೆ’ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಹೋರಾಟಕ್ಕೆ ರೈತ, ದಲಿತ, ಪ್ರಗತಿಪರ ಹಾಗೂ ಕನ್ನಡಪರ ಸಂಘಟನೆಗಳು ಸೇರಿದಂತೆ ಸ್ಥಳೀಯರು ಕೈಜೋಡಿಸಿದ್ದು 500ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಗುಂಡ್ಲುಪೇಟೆ ತಾಲ್ಲೂಕಿನ ಕಗ್ಗಳದ ಹುಂಡಿ ಬಳಿಯ ಪ್ರಾಥಮಿಕ ಚಿಕಿತ್ಸಾ ಕೇಂದ್ರದಿಂದ ಆರಂಭವಾಗುವ ಪಾದಯಾತ್ರೆ 2.5 ಕಿ.ಮೀ ದೂರದ ಮದ್ದೂರು ಚೆಕ್ಪೋಸ್ಟ್ ಬಳಿ ಸಮಾಪನಗೊಳ್ಳಲಿದೆ. ಬಳಿಕ ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ಅವರಿಗೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ.
ವನ್ಯಜೀವಿಗಳ ಪ್ರಾಣಕ್ಕೆ ಕುತ್ತು:
ಬಂಡೀಪುರ ಅರಣ್ಯದೊಳಗೆ 766 ಹಾಗೂ 212 ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಹುಲಿ, ಆನೆ, ಚಿರತೆ, ಕರಡಿ, ಜಿಂಕೆ, ಕಡವೆ, ಕಾಟಿ ಸಹಿತ ಅಳವಿನಂಚಿನಲ್ಲಿರುವ ವನ್ಯಜೀವಿ ಪ್ರಬೇಧಗಳ ಹಾಗೂ ಪಕ್ಷಿಗಳ ಆವಾಸಸ್ಥಾನ ಇದು.
‘ಸೂಕ್ಷ್ಯ ಜೀವವೈವಿಧ್ಯ ಹೊಂದಿರುವ ಬಂಡೀಪುರದಲ್ಲಿ ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದರೆ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಎದುರಾಗುತ್ತದೆ’ ಎಂಬುದು ಪರಿಸರವಾದಿಗಳ ಆತಂಕ.
ಮಾಫಿಯಾಗೆ ಅನುಮತಿ:
‘ರಾತ್ರಿ ವೇಳೆ ವಾಹನ ಸಂಚಾರ ಶುರುವಾದರೆ ಕರಿಕಲ್ಲು, ಎಂ ಸ್ಯಾಂಡ್, ಜಲ್ಲಿಕಲ್ಲು, ಟಿಂಬರ್ ಮಾಫಿಯಾ ಸಹಿತ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಲಿವೆ. ಪ್ರಾಣಿಗಳ ಅಕ್ರಮ ಬೇಟೆಯೂ ಏರಿಕೆಯಾಗಲಿವೆ. ಕೇರಳ, ತಮಿಳುನಾಡು, ಕರ್ನಾಟಕದ ನಡುವೆ ಸಂಚರಿಸುವ ವಾಹನಗಳ ಸಂಖ್ಯೆ ಮಿತಿಮೀರಿ ವನ್ಯಜೀವಿಗಳ ಮಾರಣಹೋಮವೇ ನಡೆಯಲಿದೆ’ ಎಂದು ಪರಿಸರವಾದಿ ನಾಗಾರ್ಜುನ ಕುಮಾರ್ ಆತಂಕ ವ್ಯಕ್ತಪಡಿಸಿದರು.
‘ಈಗಾಗಲೇ ಬಂಡೀಪುರದಲ್ಲಿ ದಿನದ 15 ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ಅನುಮತಿ ಇದೆ. 9 ಗಂಟೆ ಮಾತ್ರ ಪ್ರಾಣಿಗಳ ಚಲನವಲನಕ್ಕೆ ಅವಕಾಶವಿದೆ. ಪ್ರಾಣಿಗಳ ಮುಕ್ತ ಸಂಚಾರಕ್ಕೆ ತಡೆಯೊಡ್ಡಿ ವನ್ಯಜೀವಿಗಳ ನೆಲೆ ಅತಿಕ್ರಮಿಸಿಕೊಳ್ಳುವ ಯತ್ನ ಖಂಡನೀಯ. ಪರಿಸರ ಹಾಗೂ ವನ್ಯಜೀವಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಯಾರ ಒತ್ತಡಕ್ಕೂ ಮಣಿಯಬಾರದು’ ಎಂಬುದು ಪರಿಸರವಾದಿಗಳ ಒತ್ತಾಯ.
‘ನಿರ್ಬಂಧ ಮುಂದುವರಿಕೆ’
‘2009ರ ಸುಪ್ರೀಂಕೋರ್ಟ್ ತೀರ್ಪಿನಂತೆ ಬಂಡೀಪುರ ಅರಣ್ಯದೊಳಗಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನಗಳ ಸಂಚಾರ ಸಂಪೂರ್ಣ ನಿರ್ಬಂಧವಿದೆ. ನಿರ್ಬಂಧ ತೆರವಿಗೆ ಕೇರಳ ರಾಜ್ಯದಿಂದ ಅಧಿಕೃತ ಪ್ರಸ್ತಾವ ಬಂದಿಲ್ಲ. ಸಭೆಗಳೂ ನಡೆದಿಲ್ಲ. ನ್ಯಾಯಾಲಯದ ಆದೇಶದಂತೆ ನಿರ್ಬಂಧ ಮುಂದುವರಿಯಲಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ –ಪ್ರಭಾಕರನ್ ತಿಳಿಸಿದರು.
‘ಪ್ರತಿ ನಿಮಿಷಕ್ಕೆರಡು ವಾಹನ ಸಂಚಾರ’
‘16 ವರ್ಷಗಳ ಹಿಂದೆ ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅಂದಿನ ಕಾಲಘಟ್ಟಕ್ಕೆ ಹೋಲಿಸಿದರೆ ಪ್ರಸ್ತುತ ವಾಹನಗಳ ಸಂಚಾರ ದಟ್ಟಣೆ ಹತ್ತಾರು ಪಟ್ಟು ಹೆಚ್ಚಾಗಿದೆ. ಪ್ರತಿ ನಿಮಿಷಕ್ಕೆ ಎರಡು ವಾಹನಗಳು ಸಂಚರಿಸುತ್ತಿವೆ. ರಾತ್ರಿ ನಿರ್ಬಂಧ ತೆರವಾದರೆ ಪ್ರಾಣಿಗಳ ಮಾರಣ ಹೋಮ ನಡೆಯಲಿದೆ’ ಎಂಬುದು ಎಸ್.ಎಂ.ನಾಗಾರ್ಜುನ ಕುಮಾರ್ ಅವರ ಆತಂಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.