ADVERTISEMENT

ಕೊಳ್ಳೇಗಾಲ: ಆಮ್ಲಜನಕ ಜನರೇಟರ್‌ ಉದ್ಘಾಟನೆ

₹82 ಲಕ್ಷ ವೆಚ್ಚದಲ್ಲಿ ಅಳವಡಿಕೆ, 416 ಎಲ್‌ಪಿಎಂ ಸಾಮರ್ಥ್ಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 4:43 IST
Last Updated 24 ಜುಲೈ 2021, 4:43 IST
ಆಮ್ಲಜನಕ ಜನರೇಟರ್‌ ಅನ್ನು ಸಚಿವ ಎಸ್‌.ಸುರೇಶ್‌ ಕುಮಾರ್‌ ಪರಿಶೀಲಿಸಿದರು. ಶಾಸಕ ಎನ್‌.ಮಹೇಶ್‌ ಇದ್ದಾರೆ
ಆಮ್ಲಜನಕ ಜನರೇಟರ್‌ ಅನ್ನು ಸಚಿವ ಎಸ್‌.ಸುರೇಶ್‌ ಕುಮಾರ್‌ ಪರಿಶೀಲಿಸಿದರು. ಶಾಸಕ ಎನ್‌.ಮಹೇಶ್‌ ಇದ್ದಾರೆ   

ಕೊಳ್ಳೇಗಾಲ: ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಆಮ್ಲಜನಕ ಜನರೇಟರ್‌ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಶುಕ್ರವಾರ ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು, ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆಆರ್‌ಐಡಿಎಲ್ ಪ್ರಾಯೋಜಕತ್ವದಲ್ಲಿ ₹82 ಲಕ್ಷ ವೆಚ್ಚದಲ್ಲಿ 416 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಘಟಕವನ್ನು ನಿರ್ಮಿಸಲಾಗಿದೆ.ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ದುರಂತ ಸಂಭವಿಸಿದ ನಂತರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ನನ್ನ ಮನವಿಗೆ ಸ್ಪಂದಿಸಿ ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ.ರುದ್ರೇಶ್ ಅವರು ನಮ್ಮ ಆಸ್ಪತ್ರೆಗೆ ನಿಗಮದಿಂದ ದೊಡ್ಡ ಕೂಡುಗೆ ನೀಡಿದ್ದಾರೆ’ ಎಂದರು.

416 ಎಲ್ಪಿಎಂ ಸಾಮರ್ಥ್ಯದ ಆಮ್ಲಜನಕ ಘಟಕ ಒಂದು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದನೆ ಮಾಡುತ್ತದೆ. ಮತ್ತು ಒಂದು ದಿವಸಕ್ಕೆ 85 ಜಂಬೂ ಸಿಲಿಂಡರ್ನಷ್ಟು ಆಮ್ಲಜನಕ ಉತ್ಪಾದನೆ ಮಾಡುತ್ತದೆ. 41 ರೋಗಿಗಳಿಗೆ ದಿನವೀಡಿ ಆಮ್ಲಜನಕವನ್ನು ಪೂರೈಕೆ ಮಾಡಬಹುದು. 3ನೇ ಅಲೆ ಬಂದರೂ ಕೊಳ್ಳೇಗಾಲದಲ್ಲಿ ಆಮ್ಲಜನಕ ಕೊರತೆ ಕಾಡದು. ತಾಲ್ಲೂಕಿನ ಎಲ್ಲಾ ಕೇಂದ್ರದಲ್ಲಿಯೂ ಆಮ್ಲಜನಕ ಜನರೇಟರ್ ಸ್ಥಾಪನೆ ಮಾಡಲಾಗುವುದು’ ಎಂದರು.

ADVERTISEMENT

10 ನೇ ತರಗತಿ ವಿದ್ಯಾರ್ಥಿ ಮನೆಗೆ ಭೇಟಿ: ತಾಲ್ಲೂಕಿನ ಹೊಸ ಮಾಲಂಗಿ ಗ್ರಾಮದ ವಿದ್ಯಾರ್ಥಿನಿ, 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶ್ವೇತಾ, ತಿಂಗಳ ಹಿಂದೆ ನಿಮ್ಹಾನ್ಸ್‌ನಲ್ಲಿ ಬೆನ್ನು ಮೂಳೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಳು. ಬೆನ್ನು ನೋವಿನಲ್ಲೇ ಆಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದಿದ್ದಳು. ಪರೀಕ್ಷೆ ಬರೆಯಬೇಕು ಎಂಬ ಆಕೆಯ ಛಲವನ್ನು ಕಂಡು ಶಾಲೆಯ ಶಿಕ್ಷಕ ಸುನಿಲ್‌ ಗ್ಲಾಡ್ಸನ್‌ ಅವರು ತಮ್ಮ ಕಾರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ಶುಕ್ರವಾರ ಬಾಲಕಿಯ ಮನೆಗೆ ತೆರಳಿ ಆಕೆಯ ಆರೋಗ್ಯ ವಿಚಾರಿಸಿದರು.

‘ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಪರೀಕ್ಷೆಯನ್ನು ಬರೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ’ ಎಂದು ಸಚಿವರು ಹೇಳಿದರು.

ಶಾಸಕರಾದ ಎನ್.ಮಹೇಶ್, ಆರ್.ನರೇಂದ್ರ, ನಿರಂಜನ್ ಕುಮಾರ್, ನಗರಸಭೆ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಕವಿತಾ, ಸದಸ್ಯ ರಾಮಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ, ಉಪವಿಭಾಗಾಧಿಕಾರಿ ಡಾ.ಗಿರೀಶ್ ದೀಲಿಪ್ ಬದೋಲೆ, ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ತಹಶೀಲ್ದಾರ್ ಕುನಾಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗೋಪಾಲ್, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜಶೇಖರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.