ADVERTISEMENT

ಪ್ಲಾಸ್ಟಿಕ್‌ ವಿರುದ್ಧ ಅಧಿಕಾರಿಗಳ ಕಾರ್ಯಾಚರಣೆ

‘ಪ್ರಜಾವಾಣಿ’ ವರದಿಯಿಂದ ಎಚ್ಚೆತ್ತ ನಗರಸಭೆ, 50 ಕೆಜಿಗಳಷ್ಟು ಪ್ಲಾಸ್ಟಿಕ್‌ ವಶ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 20:12 IST
Last Updated 16 ಡಿಸೆಂಬರ್ 2019, 20:12 IST
ಅಧಿಕಾರಿಗಳು ಹೋಟೆಲೊಂದರಲ್ಲಿ ಕಾರ್ಯಾಚರಣೆ ನಡೆಸಿದಾಗ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಸುತ್ತಿರುವುದು ಬೆಳಕಿಗೆ ಬಂದಿದೆ
ಅಧಿಕಾರಿಗಳು ಹೋಟೆಲೊಂದರಲ್ಲಿ ಕಾರ್ಯಾಚರಣೆ ನಡೆಸಿದಾಗ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಸುತ್ತಿರುವುದು ಬೆಳಕಿಗೆ ಬಂದಿದೆ   

ಚಾಮರಾಜನಗರ: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಮತ್ತೆ ಕಾರ್ಯಾಚರಣೆ ಆರಂಭಿಸಿರುವ ನಗರಸಭೆ ಅಧಿಕಾರಿಗಳು, ವಿವಿಧ ಅಂಗಡಿ ಮಳಿಗೆಗಳ ಮೇಲೆ ಸೋಮವಾರ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಿದರು.

‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ‘ನಗರಸಭೆ ನಿರ್ಲಕ್ಷ್ಯ: ಪ್ಲಾಸ್ಟಿಕ್‌ ಬಳಕೆ ಅವ್ಯಾಹತ’ ಎಂಬ ತಲೆಬರಹದ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ನಗರಸಭೆ ಅಧಿಕಾರಿಗಳು ದಿಢೀರ್‌ ಕಾರ್ಯಾಚರಣೆ ನಡೆಸಿದ್ದಾರೆ.

ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಜೆಎಸ್ಎಸ್ ಬಾಲಕಿಯರ ಕಾಲೇಜು ಸಮೀಪದ ತರಕಾರಿ ಅಂಗಡಿಗಳು, ಹೋಟೆಲ್‌ಗಳು, ಬೇಕರಿ, ಹಾಗೂ ಇನ್ನಿತರ ಮಳಿಗೆಗಳಲ್ಲಿ ತಪಾಸಣೆ ನಡೆಸಿದರು.

ADVERTISEMENT

ನಗರದ ವಿವಿಧ ಭಾಗಗಳಲ್ಲಿರುವ ತಳ್ಳುಗಾಡಿಗಳು, ತರಕಾರಿ ಮಾರುಕಟ್ಟೆ ಮತ್ತು ಮಾರಿಗುಡಿಯ ಸುತ್ತಮುತ್ತಲಿರುವ ಮಳಿಗೆಗಳಲ್ಲೂ ಆರೋಗ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

50 ಕೆಜಿಗಳಷ್ಟು ಪ್ಲಾಸ್ಟಿಕ್‌ ವಶಪಡಿಸಿಕೊಂಡಿದ್ದಾರೆ. ಅಂಗಡಿಗಳ ಮಾಲೀಕರಿಗೆ ₹ 100ರಿಂದ ₹ 6,500ರ ವರೆಗೆ ದಂಡವನ್ನು ವಿಧಿಸಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು‌ಇನ್ನೂ ಪ್ಲಾಸ್ಟಿಕ್‌ ಉಪಯೋಗಿಸುತ್ತಿರುವುದು ಪತ್ತೆಯಾಗಿದೆ.

ಪ್ರಕರಣ ದಾಖಲಿಸುತ್ತೇವೆ: ಕಾರ್ಯಾಚರಣೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶರವಣ ಅವರು, ‘ಕೆಲವರು ಇನ್ನೂ ಪ್ಲಾಸ್ಟಿಕ್‌ ಅನ್ನು ಕದ್ದುಮುಚ್ಚಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಿಕ್ಕಿಬಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಅಂಗಡಿ ಮುಚ್ಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.