ADVERTISEMENT

ಕಂಟೈನ್‌ಮೆಂಟ್‌ ವಲಯದಲ್ಲಿ ಜಾನುವಾರುಗಳಿಗೆ ಮೇವು: ಪೊಲೀಸ್‌ ಮಾನವೀಯ ಕಾರ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 11:38 IST
Last Updated 20 ಜುಲೈ 2020, 11:38 IST
ಹಸುಗಳಿಗೆ ಮೇವು ಒದಗಿಸಿದ ಪೊಲೀಸ್‌ ಸಿಬ್ಬಂದಿ
ಹಸುಗಳಿಗೆ ಮೇವು ಒದಗಿಸಿದ ಪೊಲೀಸ್‌ ಸಿಬ್ಬಂದಿ   

ಸಂತೇಮರಹಳ್ಳಿ: ಜಾನುವಾರುಗಳಿಗೆ ಮೇವು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಹೋಬಳಿಯ ವ್ಯಕ್ತಿಯೊಬ್ಬರ ಪೊಲೀಸರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಂತೇಮರಹಳ್ಳಿ ಗ್ರಾಮದ ಹೊಸ ಬಡಾವಣೆಯೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್‌–19 ದೃಢಪಟ್ಟಿತ್ತು. ಇದರಿಂದ ಬಡಾವಣೆಯ ಒಂದು ಬೀದಿಯನ್ನು ಸೀಲ್‌ಡೌನ್‌ ಮಾಡಿ ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿತ್ತು.

ಇದರಿಂದಾಗಿ ಅದೇ ಬೀದಿಯಲ್ಲಿರುವ ಸಿದ್ದಪ್ಪ ಎಂಬುವವರ ಹಸುಗಳಿಗೆ ಮೇವಿನ ಕೊರತೆ ಉಂಟಾಯಿತು. ಸಾಮಾಜಿಕ ಕಾರ್ಯಕರ್ತ ಲೋಕೇಶ್‌ ಅವರು ವಾಟ್ಸ್‌ಆ್ಯಪ್ ಮೂಲಕ ಈ ವಿಚಾರವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರಿಗೆ ತಿಳಿಸಿದ್ದರು. ತಕ್ಷಣ ಇದಕ್ಕೆ ಸ್ಪಂದಿಸಿದ ಅವರು, ಹಸುಗಳಿಗೆ ಮೇವಿನ ವ್ಯವಸ್ಥೆ ಮಾಡುವಂತೆ ಸಂತೇಮರಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್‌ ವೆಂಕಟೇಶ್‌ ಅವರಿಗೆ ತಿಳಿಸಿದ್ದರು.

ADVERTISEMENT

ತಕ್ಷಣವೇ ಠಾಣೆಯ ಸಿಬ್ಬಂದಿ ಹಸುಗಳಿಗೆ ಮೇವನ್ನು ಒದಗಿಸಿದ್ದಾರೆ. ಈ ವಿಚಾರವನ್ನು ಚಾಮರಾಜನಗರ ಜಿಲ್ಲಾ ಪೊಲೀಸ್‌ನ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಸ್ಥಳೀಯ ಪೊಲೀಸರ ಮಾನವೀಯ ಕಾರ್ಯ ಹಾಗೂ ಲೋಕೇಶ್‌ ಅವರ ಕಾಳಜಿಯನ್ನು ಶ್ಲಾಘಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.