ಗುಂಡ್ಲುಪೇಟೆ: ಶಿವಪುರ ಗ್ರಾಮಕ್ಕೆ ವಿವಿಧ ಇಲಾಖೆ ಹಾಗೂ ಶಾಸಕರ ಅನುದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರಾಮಸ್ಥರು ಶಾಸಕ ಎಚ್.ಎಂ.ಗಣೇಶಪ್ರಸಾದ್ಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ 3300 ಜನ ಸಂಖ್ಯೆಯಿದ್ದು, 2400ಕ್ಕೂ ಹೆಚ್ಚು ಮತಗಳಿವೆ. ಹಲವು ಬೀದಿಗಳಲ್ಲಿ ಮೂಲಭೂತ ಸೌಕರ್ಯ ಇನ್ನೂ ದೊರೆತಿಲ್ಲ. ಆದ್ದರಿಂದ ವಿಶೇಷ ಅನುದಾನ ಹಾಗೂ ವಿವಿಧ ಇಲಾಖೆಗಳ ಮೂಲಕ ಉಪ್ಪಾರ ಬೀದಿ 4ನೇ ಅಂಗನವಾಡಿ ಕೇಂದ್ರಕ್ಕೆ ಸುತ್ತುಗೋಡೆ ನಿರ್ಮಾಣ, ಹೊಸ ಬಡಾವಣೆಯಲ್ಲಿ ಸಿ.ಸಿ ಚರಂಡಿ ಮತ್ತು ಸಿ.ಸಿ ರಸ್ತೆ, ಅರ್ಧಕ್ಕೆ ನಿಂತ ಉಪ್ಪಾರ ಸಮುದಾಯ ಭವನ ಕಾಮಗಾರಿ ಮುಂದುವರಿಕೆ, ಉಪ್ಪಾರ ಸಮುದಾಯವರಿಗೆ ಸರ್ಕಾರದಿಂದ ನಿವೇಶನ ಮಂಜೂರಾತಿ, ಪರಿಶಿಷ್ಟ ಜಾತಿ ಸಮುದಾಯದ ಬೀದಿಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.
ಇಲ್ಲಿನ ಸ್ಮಶಾನ ಅಭಿವೃದ್ಧಿ ಕಾಮಗಾರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳ ದುರಸ್ತಿ, ಪರಿಶಿಷ್ಟ ಜಾತಿ ಬೀದಿ, ಎರಡನೇ ಅಂಗನವಾಡಿ ಕೇಂದ್ರಕ್ಕೆ ಸುತ್ತುಗೋಡೆ ನಿರ್ಮಾಣ, ಮೊದಲನೇ ವಾರ್ಡಿನ ಜನತಾ ಬಡಾವಣೆಯಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಗ್ರಾಮದ ಪ್ರಮುಖ ರಸ್ತೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹಂಗಳದ ರಸ್ತೆವರೆಗೆ ಸಿ.ಸಿ ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಶಿವಪುರ ಗ್ರಾಮದ ಸುತ್ತಮುತ್ತಲಿನ ಪಸಯ್ಯನಪುರ, ಕಲ್ಲಿಗೌಡನಹಳ್ಳಿ, ಹಂಗಳಪುರ, ಕಾರ್ಲೆ, ಹುಂಡೀಮನೆ, ಮೈದನಹಳ್ಳಿ ವ್ಯಾಪ್ತಿಗೆ ಸುಮಾರು 850 ಐ.ಪಿ. ಸೆಟ್ಗಳಿರುವುದರಿಂದ ಹೆಚ್ಚುವರಿ ವಿದ್ಯುತ್ ಅವಶ್ಯಕತೆಯಿದೆ. ಈಗಾಗಲೇ ಸರ್ಕಾರದಲ್ಲಿ ಪ್ರಸ್ತಾವನೆಯಾಗಿರುವ ಕೆ.ವಿ.ವಿದ್ಯುತ್ ಉಪಕೇಂದ್ರವನ್ನು ಶೀಘ್ರವಾಗಿ ಶಿವಪುರ ಗ್ರಾಮದಲ್ಲಿ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ಗ್ರಾಪಂ ಸದಸ್ಯ ಶಿವಪುರ ಮಹದೇವಪ್ಪ, ತಾಲ್ಲೂಕು ಯುವ ಘಟಕ ಅಧ್ಯಕ್ಷ ಭರತ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಮಹದೇವಶೆಟ್ಟ(ಮೂಗಪ್ಪ), ಸಿದ್ದಶೆಟ್ಟಿ, ಮಹೇಶ್, ಮಾದಪ್ಪ, ಮಾಧು, ಎಸ್ಡಿಎಂಸಿ ಅಧ್ಯಕ್ಷ ಕುಮಾರ್, ಸದಸ್ಯ ಸಿದ್ದರಾಜು, ರೈತ ಸಂಘದ ಗ್ರಾಮ ಘಟಕದ ಉಪಾಧ್ಯಕ್ಷ ಪರಶಿವಶೆಟ್ಟಿ, ಮಹೇಶ್, ಚಿಕ್ಕಮಹದೇವಶೆಟ್ಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.