ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ರಸ್ತೆ ತಿರುವು ದುರಸ್ತಿ, ಸವಾರರ ನಿಟ್ಟುಸಿರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 16:48 IST
Last Updated 14 ಸೆಪ್ಟೆಂಬರ್ 2021, 16:48 IST
ರಾಮಸಮುದ್ರದ ಬಳಿಯ ತಿರುವಿನಲ್ಲಿ ರಸ್ತೆ ದುರಸ್ತಿ ನಡೆದಿದೆ
ರಾಮಸಮುದ್ರದ ಬಳಿಯ ತಿರುವಿನಲ್ಲಿ ರಸ್ತೆ ದುರಸ್ತಿ ನಡೆದಿದೆ   

ಚಾಮರಾಜನಗರ: ನಗರದ ರಾಮ ಸಮುದ್ರದ ಸಮೀಪ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಉಂಟಾಗಿರುವ ಗುಂಡಿ ಮುಚ್ಚಲು ಲೋಕೋಪಯೋಗಿ ಇಲಾಖೆ ಕ್ರಮಗೊಂಡಿದ್ದು, ವಾಹನ ಸವಾರರು ನಿಟ್ಟುಸಿರು ಬಿಡು ವಂತಾಗಿದೆ.

‌ಬಿ.ರಾಚಯ್ಯ ಜೋಡಿ ರಸ್ತೆಯು ರಾಮಸಮುದ್ರದ ಬಳಿ ಮುಕ್ತಾಯವಾದ ನಂತರ, ಬೂದಿತಿಟ್ಟು ಕ್ರಾಸ್‌ ಹಾಲಿನ ಡೇರಿಗೂ ಮೊದಲು ಇರುವ ತಿರುವಿನಲ್ಲಿ ದೊಡ್ಡ ಹಳ್ಳ ನಿರ್ಮಾಣವಾಗಿತ್ತು.ಮಾತ್ರವಲ್ಲದೇ ರಸ್ತೆಯ ಅಗಲಕ್ಕೂ ಹಳ್ಳದ ರಚನೆ ಇತ್ತು. ಎರಡು ವರ್ಷಗಳಿಂದಲೂ ರಸ್ತೆ ಇದೇ ರೀತಿ ಇದ್ದರೂ, ದುರಸ್ತಿಗಾಗಿ ಕ್ರಮ ವಹಿಸಿರಲಿಲ್ಲ. ವಾಹನ ಸವಾರರು ಅದರಲ್ಲೂ ವಿಶೇಷವಾಗಿ ದ್ವಿಚಕ್ರ ಹಾಗೂ ಮೂರು ಚಕ್ರಗಳ ವಾಹನಗಳ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿತ್ತು.

ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಪ್ರಸ್ತಾಪಿಸಿ ‘ಪ್ರಜಾವಾಣಿ’ಯ ಆ.25ರ ಸಂಚಿಕೆಯಲ್ಲಿ ‘ಬಲಿಗಾಗಿ ಕಾಯುತ್ತಿದೆ ಗುಂಡಿ; ದುರಸ್ತಿಗೆ ಆಗ್ರಹ’ ಎಂಬ ತಲೆಬರಹದ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ADVERTISEMENT

ಆ ಸಂದರ್ಭದಲ್ಲಿ ಪತ್ರಿಕೆಗೆ ಪ್ರತಿಕ್ರಿಯಿಸಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ವಿಜಯ್‌ ಕುಮಾರ್‌, ‘ಗುಂಡಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಂದ ದೂರುಗಳು ಬಂದಿವೆ. ದುರಸ್ತಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಮೂರ್ನಾಲ್ಕು ದಿನಗಳಲ್ಲಿ ಸರಿಯಾಗಲಿದೆ’ ಎಂದು ಹೇಳಿದ್ದರು.

ವಿಶೇಷ ವರದಿ ಪ್ರಕಟವಾಗಿ 19 ದಿನದ ನಂತರ ಗುಂಡಿ ಹಾಗೂ ತಿರುವಿನಲ್ಲಿ ಉಂಟಾಗಿದ್ದ ಆಳದ ರಚನೆಯನ್ನು ಮುಚ್ಚಲು ಇಲಾಖೆ ಕ್ರಮ ಕೈಗೊಂಡಿದೆ. ಮಂಗಳವಾರ ಆರು ಮಂದಿ ಕಾರ್ಮಿಕರು ದುರಸ್ತಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.