
ಗುಂಡ್ಲುಪೇಟೆ: ತಾಲ್ಲೂಕಿನ ಬಸವಾಪುರ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ಗ್ರಾಮ ಘಟಕವನ್ನು ರೈತ ಸಂಘಟನೆ ರಾಜ್ಯ ಉಪಾಧ್ಯಕ್ಷ ಗುರುಪ್ರಸಾದ್ ಉದ್ಘಾಟಿಸಿದರು.
‘ರೈತ ಸಂಘಟನೆ ರಾಜ್ಯ ಉಪಾಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಜೊತೆಗೆ ಕೇಂದ್ರವು ಕರ್ನಾಟಕ ರಾಜ್ಯವನ್ನು ಸಂಪೂರ್ಣ ಕಡೆಗಣಿಸಿದ್ದು, ಬಜೆಟ್ನಲ್ಲಿ ಅನುದಾನ ನೀಡದೆ ಅನ್ಯಾಯ ಎಸಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಅತಿಯಾದ ಲಂಚಗುಳಿತನದಿಂದ ರೈತರ ಬದುಕನ್ನು ದುರ್ಭರಗೊಳಿಸಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕಾಲ್ನಡಿಗೆ ಮೂಲಕ ಮೇಕೆದಾಟು ಯೋಜನೆ ಹೆಸರಿನಲ್ಲಿ ದೊಡ್ಡ ಪ್ರಚಾರ ಪಡೆದುಕೊಂಡರು. ಈಗ ಜಲ ಸಂಪನ್ಮೂಲ ಸಚಿವರಾಗಿ ಮೇಕೆದಾಟು ಯೋಜನೆ ಜಾರಿ ವಿಷಯದಲ್ಲಿ ಜಾಣಕುರುಡು ಪ್ರದರ್ಶನಗಳನ್ನು ಮಾಡುತ್ತಿದ್ದಾರೆ. ರೈತ ವಿರೋಧಿ ಧೋರಣೆಗಳ ವಿರುದ್ಧದ ಗಟ್ಟಿ ಹೋರಾಟಕ್ಕೆ ಯುವಕರನ್ನು ಚಳವಳಿಗೆ ಕರೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಬಸವಾಪುರ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ ಸಂಘಟನೆಗೆ ಬಲ ಬಂದಿದೆ ಎಂದರು.
ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ, ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ಶಾಸಕರು ಶೀಘ್ರ ಕ್ರಮ ವಹಿಸಬೇಕು. ಇಲ್ಲದಿದ್ದರೆ ತೀವ್ರ ಚಳವಳಿಯನ್ನು ರೂಪಿಸಬೇಕಾಗುತ್ತದೆ. ಈಗಾಗಲೇ ಅನೇಕ ಕಡೆ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ನಿಂತುಹೋಗಿವೆ. ರೈತರು ಬರಗಾಲದ ಸಾಧ್ಯತೆ ಬಗ್ಗೆ ಚಿಂತೆಗೀಡಾಗಿದ್ದಾರೆ. ಚಾಮರಾಜನಗರದ ತಾಲ್ಲೂಕಿನಂತೆ ಇಲ್ಲಿನ ಕೆರೆಗಳಿಗೆ ನೀರು ತುಂಬಿಸದಿರುವುದು ತೀವ್ರ ನಿರಾಶೆ ಮೂಡಿಸಿದೆ. ಆದ್ದರಿಂದ ಶಾಸಕರು ಕೆರೆಗಳಿಗೆ ನೀರು ತುಂಬಿಸಬೇಕು’ ಎಂದು ಒತ್ತಾಯಿಸಿದರು.
ಸಂಘಟನೆ ತಾಲ್ಲೂಕು ಅಧ್ಯಕ್ಷ ಮಹೇಶ್, ಹಸಿರು ಸೇನೆ ಅಧ್ಯಕ್ಷ ಹಿರೀಕಾಟಿ ಚಿಕ್ಕಣ್ಣ ಜಿಲ್ಲಾ ಸಂಚಾಲಕ ಮೂರ್ತಿಬುದ್ಧಿ, ತಾಲೂಕು ಕಾರ್ಯದರ್ಶಿ ಬೆಟ್ಟಳ್ಳಿ ಗುರು, ಶಂಭುಲಿಂಗಪ್ಪ, ಸತೀಶ, ಸುರೇಶ, ಸ್ವಾಮಿ, ಮಣಿಕಂಠ, ಪ್ರಸಾದ, ಹಕ್ಕಲಪುರ ಮಹೇಶ, ನಂದೀಶ, ಯೋಗಿ, ಹುಲಗ ನಾಯಕ, ರವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.