ADVERTISEMENT

ಜಗಜೀವನರಾಂ ಶೋಷಿತ ವರ್ಗದ ದನಿ

ಹಸಿರುಕ್ರಾಂತಿಯ ಹರಿಕಾರನ 36ನೇ ಪುಣ್ಯಸ್ಮರಣೆ: ಎಡಿಸಿ ಕಾತ್ಯಾಯಿನಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 16:26 IST
Last Updated 6 ಜುಲೈ 2022, 16:26 IST
ಡಾ.ಬಾಬು ಜಗಜೀವನರಾಂ ಅವರ 36ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರು ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮುಖಂಡರಾದ ಅರಕಲವಾಡಿ ನಾಗೇಂದ್ರ, ಕಾಂತರಾಜು ಇತರರು ಇದ್ದರು
ಡಾ.ಬಾಬು ಜಗಜೀವನರಾಂ ಅವರ 36ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರು ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮುಖಂಡರಾದ ಅರಕಲವಾಡಿ ನಾಗೇಂದ್ರ, ಕಾಂತರಾಜು ಇತರರು ಇದ್ದರು   

ಚಾಮರಾಜನಗರ: ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್‌ರಾಂ ಅವರ ಕೊಡುಗೆಯನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರು ಬುಧವಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರನಾಯಕ, ಭಾರತದ ಮಾಜಿ ಉಪಪ್ರಧಾನಿ, ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 36ನೇ ಪುಣ್ಯಸ್ಮರಣೆಯಲ್ಲಿ ಬಾಬೂಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

‘ದೇಶದ ಪ್ರಬುದ್ದ ರಾಜಕಾರಣಿಯಾಗಿದ್ದ ಬಾಬೂಜಿಯವರು ಕಾನೂನು, ಆಹಾರ, ಕಾರ್ಮಿಕ ಇಲಾಖೆಗಳೂ ಸೇರಿದಂತೆ ವಿವಿಧ ಖಾತೆಗಳನ್ನು ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಸಮರ್ಪಕವಾಗಿ ನಿಭಾಯಿಸಿ ದೇಶದ ಶೋಷಿತ ವರ್ಗದವರಿಗೆ ದನಿಯಾದರು. ದೀನ ದಲಿತರ ಕಲ್ಯಾಣಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ ಅವರ ಹೋರಾಟದ ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರು ಭೀಮಾಸೇನ ಮಾತನಾಡಿ, ‘ದಿಟ್ಟತನ ಎಂಬುದು ಬಾಬೂಜಿ ಅವರ ವಿಶೇಷ ಗುಣವಾಗಿತ್ತು. ಅಂದಿನ ಕಾಲಘಟ್ಟದಲ್ಲಿ ಇತರರಿಗಿರುವ ಸೌಲಭ್ಯ ಸವಲತ್ತುಗಳು ಶೋಷಿತ ವರ್ಗದವರಿಗೆ ಏಕಿಲ್ಲ ಎಂದು ಪ್ರಶ್ನೆ ಮಾಡುವುದು ಹಾಗೂ ಶೋಷಿತರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ವಿರುದ್ದ ಸೆಟೆದು ನಿಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಶೋಷಿತರ ಪರವಾಗಿ ದನಿ ಎತ್ತಿದವರಲ್ಲಿ ಬಾಬೂಜಿಯವರು ಪ್ರಮುಖರು’ ಎಂದರು. ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಂ ಅವರು ಶೋಷಿತ ಸಮುದಾಯದವರ ಎರಡು ಕಣ್ಣುಗಳಿದ್ದಂತೆ. ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಗಜೀವನ್ ರಾಂ ಅವರು 3ನೇ ಪಂಚವಾರ್ಷಿಕ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಬರಗಾಲದಿಂದ ನರಳುವಂತಹ ಸ್ಥಿತಿಯಲ್ಲಿ ಬಡವರ ಪರವಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾದರು. ಕೃಷಿ ಕ್ಷೇತ್ರದಲ್ಲಿ ಜ್ಞಾನ, ವಿಜ್ಞಾನ, ತಾಂತ್ರಿಕ ಜ್ಞಾನ ಹಾಗೂ ತಂತ್ರಾಂಶ ಅಳವಡಿಸಿ ಹಸಿರುಕ್ರಾಂತಿಯನ್ನು ಮಾಡಿದರು’ ಎಂದು ತಿಳಿಸಿದರು.

ಮುಖಂಡರಾದ ಅರಕಲವಾಡಿ ನಾಗೇಂದ್ರ ಹಾಗೂ ಕಾಂತರಾಜು ಅವರು ಮಾತನಾಡಿದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ತಿಮ್ಮರಾಜು, ಮುಖಂಡರಾದ ಬಸವನಪುರ ರಾಜಶೇಖರ್, ಆಲೂರು ಮಲ್ಲು, ಚಾ.ಗು.ನಾಗರಾಜು, ಶ್ರೀಕಂಠ, ಎಂ. ಶಿವಕುಮಾರ್, ರಾಚಯ್ಯ, ಕರಿಯಪ್ಪ, ಗಿರಿ, ಡ್ಯಾನ್ಸ್ ಬಸವರಾಜು, ವೆಲ್ಡಿಂಗ್ ನಿಂಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.