ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಾಜ್ಯ ಹೆದ್ದಾರಿ 79ರಲ್ಲಿ ದುರಸ್ತಿ ಮಾಡಿದ ಕೆಲವೇ ದಿನಗಳಲ್ಲಿ ಮತ್ತೆ ಉಂಟಾಗಿದ್ದ ಗುಂಡಿಗಳನ್ನು ಬುಧವಾರ ಮುಚ್ಚಲಾಗಿದೆ.
ಬೆಟ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗಿತ್ತು. ಕಳಪೆ ಕಾಮಗಾರಿಯ ಕಾರಣದಿಂದ ವಾರದ ಅವಧಿಯಲ್ಲಿ ಡಾಂಬರು ಕಿತ್ತು ಬಂದು ಮತ್ತೆ ಗುಂಡಿಗಳು ಸೃಷ್ಟಿಯಾಗಿದ್ದವು.
ಈ ಬಗ್ಗೆ ‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯಲ್ಲಿ ‘ಸಿ.ಎಂ ಹೋಗಾಯ್ತು, ತೇಪೆಯೂ ಕಿತ್ತೋಯ್ತು’ ಎಂಬ ತಲೆ ಬರಹದ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿಗೆ ಸ್ಪಂದಿಸಿರುವ ಅಧಿಕಾರಿಗಳು, ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಂಡಿದ್ದಾರೆ.
ಬುಧವಾರ ಪಟ್ಟಣದ ನಾಗಪ್ಪ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಉಂಟಾಗಿದ್ದ ಗುಂಡಿಗಳನ್ನು ಕೆ–ಶಿಪ್ ವತಿಯಿಂದ ಮುಚ್ಚಲಾಗಿದೆ. ಕಾಮಗೆರೆಯಿಂದ ಮಧುವನಹಳ್ಳಿವರೆಗೂ ದುರಸ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಮಹದೇಶ್ವರ ಬೆಟ್ಟ ಉಪ ವಿಭಾಗದ ಎಂಜಿನಿಯರ್ ತನೂಜ್ ಅವರು, ‘ಮಧುವನಹಳ್ಳಿಯಿಂದ ಹನೂರುವರೆಗೆ ಕೆ–ಶಿಪ್ ವತಿಯಿಂದ ರಸ್ತೆ ನಿರ್ವಹಣೆ ಮಾಡುತ್ತಿರುವುದರಿಂದ, ಅವರೇ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಹನೂರಿನಿಂದ ಕೌದಳ್ಳಿವರೆಗೆ ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ ಜನವರಿಯಲ್ಲಿ ಎರಡನೇ ಹಂತದಲ್ಲಿ ರಸ್ತೆಯನ್ನು ನಿರ್ವಹಣೆ ಮಾಡಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.