ಮಹದೇಶ್ವರ ಬೆಟ್ಟ: ಇಲ್ಲಿನ ದೀಪದಗಿರಿ ಒಡ್ಡುವಿನಲ್ಲಿ ನಿರ್ಮಾಣವಾಗಿರುವ 108 ಅಡಿ ಎತ್ತರದ ಮಹದೇಶ್ವರ ಸ್ವಾಮಿ ಪ್ರತಿಮೆ ಇರುವ ಪ್ರದೇಶದ ಸುತ್ತದ ಇಳಿಜಾರಿನಲ್ಲಿ ಕಲ್ಲಿನಿಂದ ನಿರ್ಮಿಸಲಾಗಿರುವ ತಡೆಗೋಡೆಯ ಒಂದು ಭಾಗ ಕುಸಿದಿದೆ.
ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಇದೇ 18ರಂದು ಪ್ರತಿಮೆ ಉದ್ಘಾಟನೆಯಾಗಲಿದ್ದು, ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರತಿಮೆಯ ಮುಂಭಾಗದಲ್ಲಿ ಸುಮಾರು 30 ಅಡಿ ಸ್ಥಳವನ್ನು ಸಮತಟ್ಟುಗೊಳಿಸಲಾಗಿದೆ.
ಬೆಟ್ಟದ ತಳಭಾಗದಿಂದ ಮೇಲ್ಭಾಗದವರೆಗೂ ಕಲ್ಲುಕಟ್ಟೆ ನಿರ್ಮಾಣ ಮಾಡಲಾಗಿತ್ತು. ಸೋಮವಾರ ತಡರಾತ್ರಿ ಪ್ರತಿಮೆಯ ಬಲಭಾಗದ ಮೂಲೆಯಲ್ಲಿ ತಡೆಗೋಡೆ ಕುಸಿದಿದೆ. ಕಲ್ಲುಗಳು ಕೆಳಗೆ ಉರುಳಿ ಬಿದ್ದಿವೆ.
‘ನೀರುಣಿಸದೆ ಮಣ್ಣು ಸಮತಟ್ಟು ಮಾಡಿರುವುದರಿಂದ ಗೋಡೆ ಕುಸಿದಿದೆ. ಭದ್ರವಾದ ತಡೆಗೋಡೆ ನಿರ್ಮಿಸದಿದ್ದರೆ, ಮಳೆಗಾಲದಲ್ಲಿ ಕಷ್ಟವಾಗಲಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿ ದೇವಿ, ‘ಸೋಮವಾರ ರಾತ್ರಿ 9 ಗಂಟೆಯವರೆಗೂ ನಮ್ಮ ಸಿಬ್ಬಂದಿ ಅಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ 12–1 ಗಂಟೆ ಸುಮಾರಿಗೆ ಯಾರೋ ಉದ್ದೇಶಪೂರ್ವಕವಾಗಿ ತಡೆಗೋಡೆಗೆ ಹಾನಿ ಮಾಡಿರುವ ಶಂಕೆ ಇದೆ. ಶೀಘ್ರದಲ್ಲಿ ಅದು ಗೊತ್ತಾಗಲಿದೆ. ಪ್ರತಿಮೆ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.