ADVERTISEMENT

ಆರ್‌ಟಿಐ ದುರ್ಬಳಕೆ ಸಲ್ಲ; ನಿಯಮ ಮೀರಿ ವರ್ತಿಸುವಂತಿಲ್ಲ‌

ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಬದ್ರುದ್ದೀನ್, ಹರೀಶ್ ಕುಮಾರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:22 IST
Last Updated 16 ನವೆಂಬರ್ 2025, 5:22 IST
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಶನಿವಾರ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ಜೊತೆ ನಡೆದ ಸಂವಾದ ಸಭೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಬದ್ರುದ್ದೀನ್ ಹಾಗೂ ಹರೀಶ್ ಕುಮಾರ್ ಮಾತನಾಡಿದರು
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಶನಿವಾರ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ಜೊತೆ ನಡೆದ ಸಂವಾದ ಸಭೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಬದ್ರುದ್ದೀನ್ ಹಾಗೂ ಹರೀಶ್ ಕುಮಾರ್ ಮಾತನಾಡಿದರು   

ಚಾಮರಾಜನಗರ: ‘ರಾಜಕೀಯ ಪಕ್ಷ, ಸಂಘ ಸಂಸ್ಥೆ ಹಾಗೂ ಮಾಧ್ಯಮಗಳ ಹೆಸರಿನಲ್ಲಿ ಆರ್‌ಟಿಐ ಕಾಯ್ದೆಯ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ನಿಯಮ ಉಲ್ಲಂಘಿಸುವವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ’ ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಬದ್ರುದ್ದೀನ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಇರಬೇಕು ಎಂಬ ಉದ್ದೇಶದಿಂದ ಮಾಹಿತಿ ಹಕ್ಕು ಅಧಿನಿಯಮ ಜಾರಿಗೆ ಬಂದಿದೆ. ಕಾಯ್ದೆಯ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲು ಹಾಗೂ ಆರ್‌ಟಿಐ ಕಾಯ್ದೆಯನ್ನೇ ವೃತ್ತಿಮಾಡಿಕೊಳ್ಳಲು ಬಿಡುವುದಿಲ್ಲ ಎಂದು ನೀಡಿದರು.

ಆರ್‌ಟಿಐ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿಕೊಂಡು ನಿಯಮಮೀರಿ ವರ್ತಿಸಲು ಅಧಿಕಾರಿಗಳಿಗೂ ಅವಕಾಶವಿಲ್ಲ. ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ನಿರಾಕರಿಸುವಂತಿಲ್ಲ. ಸಲ್ಲಿಕೆಯಾಗುವ ಅರ್ಜಿಯಲ್ಲಿರುವ ಅಂಶಗಳು ಮುಖ್ಯವೇ ಹೊರತು ಅರ್ಜಿದಾರನ ವೈಯಕ್ತಿಕ ಹಿನ್ನೆಲೆಯಲ್ಲ ಎಂದು ಬದ್ರುದ್ದೀನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಅರ್ಜಿದಾರರು ಕಾನೂನು ಮೀರಿ ವರ್ತಿಸಿದರೆ, ಆಡಳಿತಕ್ಕೆ ಅಡ್ಡಿ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು. ಆದರೆ, ಅರ್ಜಿಗಳನ್ನು ನಿರಾಕರಿಸುವ ಅಧಿಕಾರ ಪ್ರಾಥಮಿಕ ಹಂತದಲ್ಲಿ ಇರುವುದಿಲ್ಲ. ಉದ್ದೇಶಪೂರ್ವಕವಾಗಿ, ಸಾರ್ವಜನಿಕ ಹಿತಾಸಕ್ತಿ ಹೊಂದಿರದ, ಆಡಳಿತ ವ್ಯವಸ್ಥೆಗೆ ಅಡ್ಡಿಯುಂಟು ಮಾಡುವ ಅಂಶಗಳು ಮೇಲ್ನೋಟಕ್ಕೆ ಸಾಬೀತಾದರೆ ಆಯೋಗ ಹಾಗೂ ನ್ಯಾಯಾಲಯ ಮಾತ್ರ ಅರ್ಜಿಗಳನ್ನು ರದ್ದುಪಡಿಸಬಹುದು ಎಂದರು.

ಮಾಹಿತಿ ಹಕ್ಕು ಕಾಯ್ದೆಯನ್ನು ಸದ್ಭಳಕೆ ಮಾಡಿಕೊಂಡು ಸರ್ಕಾರವನ್ನೇ ಬುಡಮೇಲು ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ, ಮಾಹಿತಿ ಹಕ್ಕುದಾರರು ಗುಣಮಟ್ಟದ ಅರ್ಜಿಗಳನ್ನು ಹಾಕಬೇಕು. ಆರ್‌ಟಿಐ ಕಾಯ್ದೆ ಜಾರಿಯಾದ 20 ವರ್ಷಗಳಲ್ಲಿ ಸದ್ಬಳಕೆಯ ಜೊತೆಗೆ ದುರ್ಬಳಕೆಯೂ ಆಗಿದ್ದು ಕಡಿವಾಣ ಹಾಕಲು ಆಯೋಗ ಕ್ರಮ ಕೈಗೊಂಡಿದೆ ಎಂದರು.

ಮಾಹಿತಿ ಹಕ್ಕು ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಾಗ ಇದ್ದ 55,400 ಮೇಲ್ಮನವಿ ಅರ್ಜಿಗಳ ಪೈಕಿ 20,000 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ 614 ಮೇಲ್ಮನವಿಗಳಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ 249, ಕಂದಾಯ ಇಲಾಖೆಯ 105, ಕೃಷಿ ಇಲಾಖೆಯ 46, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 37 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದು ವಿಲೇವಾರಿಗೆ ಕ್ರಮವಹಿಸಲಾಗಿದೆ ಎಂದರು.

ಮಾಹಿತಿ ಹಕ್ಕು ಆಯೋಗದ ಆಯುಕ್ತ ಹರೀಶ್ ಕುಮಾರ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಸರಿಯಾಗಿ ವಿಲೇವಾರಿ ಮಾಡದ ಪರಿಣಾಮ ಮೇಲ್ಮನವಿ ಪ್ರಾಧಿಕಾರಕ್ಕೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

ಅರ್ಜಿ ವಿಲೇವಾರಿಯಲ್ಲಿ ಆಗುತ್ತಿರುವ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾರ್ಯಾಗಾರ ಹಾಗೂ ಸಂವಾದ ಹಮ್ಮಿಕೊಳ್ಳಲಾಗಿದೆ. ಚಾಮರಾಜನಗರ ಜಿಲ್ಲೆ ಸೇರಿ ರಾಜ್ಯದ 17 ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಲಾಗಿದ್ದು ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಇದ್ದರು.

‘ದಂಡ ವಸೂಲಾತಿ ಪ್ರಕ್ರಿಯೆಗೆ ಒತ್ತು’

ಮಾಹಿತಿ ಹಕ್ಕು ಕಾಯ್ದೆಯಡಿ ನಿರ್ಧಿಷ್ಟ ಅವಧಿಯೊಳಗೆ ಮಾಹಿತಿ ನೀಡದ ಕಾಯ್ದೆ ಉಲ್ಲಂಘಿಸುವ ಅಧಿಕಾರಿಗೆ ದಂಡ ವಿಧಿಸುವ ಹಾಗೂ ಶಿಸ್ತು ಕ್ರಮ ಜರುಗಿಸುವ ಪ್ರಕ್ರಿಯೆ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಆರೋಪಿತ ಅಧಿಕಾರಿಯಿಂದ ದಂಡದ ಮೊತ್ತವನ್ನು ವೇತನದಲ್ಲಿ ಕಡಿತಗೊಳಿಸಲಾಗುತ್ತಿದೆ ನಿವೃತ್ತಿಯಾಗಿದ್ದರೂ ಪಿಂಚಣಿಯಲ್ಲೂ ಕಡಿತಗೊಳಿಸಲಾಗುತ್ತಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗೆ ದಂಡ ವಿಧಿಸುವ ಹಾಗೂ ಶಿಸ್ತು ಕ್ರಮ ತೆಗೆದುಕೊಳ್ಳುವ ನಿಯಮ ಜಾರಿಗೆ ಸರ್ಕಾರಕ್ಕೆ ಶಿಪಾರಸು ಮಾಡಲಾಗಿದೆ. ಮಾಹಿತಿ ಹಕ್ಕು ಅಧಿನಿಯಮ ಉಲ್ಲಂಘಿಸಿದ ಅಧಿಕಾರಿ ಶಿಸ್ತುಕ್ರಮ ಹಾಗೂ ದಂಡದಿಮದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಹೇಳಿದರು.

‘ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಮಾಹಿತಿ’

ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸುವ ಮುನ್ನ ನಿಯಮಗಳ ಅರಿವಿರಬೇಕು ಸಾರ್ವಜನಿಕ ಹಿತಾಸಕ್ತಿಯ ಉದ್ದೇಶ ಇರಬೇಕು ಪಡೆಯುವ ಪ್ರತಿಗೆ ತಲಾ ₹ 2ರಂತೆ ಶುಲ್ಕ ಪಾವತಿಸಬೇಕು ಅರ್ಜಿದಾರ ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ 100 ಶೀಟ್‌ವರೆಗಿನ ಮಾಹಿತಿಗೆ ಶುಲ್ಕ ಇರುವುದಿಲ್ಲ ಅರ್ಜಿಯ ಶುಲ್ಕ ಪಾವತಿಸುವಂತೆ ಇಲ್ಲ. ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಅರ್ಜಿದಾರರಿಗೆ ಮಾಹಿತಿ ಕೊಡಬೇಕು ತಪ್ಪು ಮಾಹಿತಿ ನೀಡಿದ ಹಾಗೂ ಅವಧಿಯೊಳಗೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.