
ಸಂತೇಮರಹಳ್ಳಿ: ಭಾರತದ ಗ್ರಾಮಗಳ ಅಭಿವೃದ್ಧಿ ಕುರಿತು ಮಹಾತ್ಮ ಗಾಂಧೀಜಿಯವರು ಕಂಡ ಕನಸು ನನಸು ಮಾಡಲು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು ತಿಳಿಸಿದರು.
ಸಮೀಪದ ಕಮರವಾಡಿ ಗ್ರಾಮದಲ್ಲಿ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಬುಧವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಗ್ರಾಮಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳುವುದರ ಜತೆಗೆ ಸ್ವಚ್ಛತೆಯಿಂದಾಗುವ ಉಪಯೋಗ ಮತ್ತು ಅಶುಚಿತ್ವದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಅತ್ಯಂತ ಹಿಂದುಳಿದ ಪ್ರದೇಶಗಳನ್ನು ಶಿಬಿರಾಧಿಕಾರಿಗಳು ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಥಿಯೋಡರ್ ಲೂಥರ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರವು ಒಂದು ಶೈಕ್ಷಣಿಕ ವಿಸ್ತರಣಾ ಕಾರ್ಯಕ್ರಮವಾಗಿದೆ. ಪರಿಸರ ಸಂರಕ್ಷಣೆ ಅರಿವು, ವಿವಿಧ ಸಾಮಾಜಿಕ ಪಿಡುಗುಗಳ ಅರಿವು ಮುಂತಾದ ಕಾರ್ಯ ಚಟುವಟಿಕೆಗಳನ್ನು ಶಿಬಿರದ ಮೂಲಕ ಮಾಡಲಾಗುತ್ತದೆ. ಹಾಗಾಗೀ ಶಿಬಿರಾರ್ಥಿಗಳು ನಿಸ್ವಾರ್ಥ ಭಾವನೆಯಿಂದ ಭಾಗವಹಿಸಿ ಕಾರ್ಯಕ್ರಮದ ಗುರಿ ಮತ್ತು ಉದ್ದೇಶಗಳನ್ನು ಈಡೇರಿಸಬೇಕು ಎಂದು ತಿಳಿಸಿದರು.
ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ ಮಾತನಾಡಿ, ವಾಹನ ಹಾಗೂ ಮೂಲ ಸೌಲಭ್ಯಗಳಿಲ್ಲದಂತಹ ಇಂತಹ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ಹಮ್ಮಿಕೊಂಡು ಇತರೆ ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡಬೇಕು ಎಂದರು
ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಶಾಂತರಾಜು, ಅಭಿವೃದ್ಧಿ ಅಧಿಕಾರಿ ವೆಂಕಟಚಲಾ ಮೂರ್ತಿ, ಸಿಡಿಎಸ್ಸಿ ಸದಸ್ಯ ಬಡಗಲ ಮೋಳೆ ಚೇತನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜವರೇಶ್, ಮುಖಂಡರಾದ ಕೊಟ್ಟೂರಪ್ಪ, ಗೌ.ಮಲ್ಲೇಶ್, ಮಹದೇವಯ್ಯ, ಮಹದೇವಸ್ವಾಮಿ, ಕುಮಾರ್, ಬಸವರಾಜು, ಶಿಭಿರಾಧಿಕಾರಿಗಳಾದ ಸಿಂಧೂ, ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.