
ಸಂತೇಮರಹಳ್ಳಿ: ಕಟ್ಟಡ ಕಾರ್ಮಿಕರಿಗೆ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಸರ್ಕಾರಗಳು ನೆರವು, ಸೌಲಭ್ಯಗಳನ್ನು ಒದಗಿಸಬೇಕು ಎಂದು ‘ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘ’ದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಸಿ.ಕಿರಣ್ ತಿಳಿಸಿದರು.
ಗಣಗನೂರುಪುರ ಗ್ರಾಮದಲ್ಲಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲಾ ಸಮಿತಿ ಭಾನುವಾರ ಆಯೋಜಿಸಿದ್ದ ‘ ಜೈ ಕನ್ನಡ ಮಾತೆ ಅಸಂಘಟಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾರ್ಮಿಕರ ಜೀವನ ಶ್ರಮದಾಯಕವಾಗಿರುತ್ತದೆ. ಯಾವುದೇ ಭದ್ರತೆ ಇರುವುದಿಲ್ಲ. ಇವರ ಕುಟುಂಬಗಳ ಉತ್ತಮ ಜೀವನ ನಿರ್ವಹಣೆಗಾಗಿ ರಕ್ಷಣೆ ಅವಶ್ಯಕವಾಗಿದೆ. ಸರ್ಕಾರಗಳು ಸೂಕ್ತ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು , ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನೆರವಾಗಬೇಕು’ ಎಂದರು. ಎಂಜಿನಿಯರ್ ಕಟ್ಟಡ ಕಾಮಗಾರಿಗೆ ಯೋಜನೆ ರೂಪಿಸಿದರಷ್ಟೇ ಸಾಲದು. ಸೂಕ್ತ ರೀತಿಯಲ್ಲಿ ಕಟ್ಟಡಗಳನ್ನು ನಿರ್ಮಿಸುವ ಜವಾಬ್ದಾರಿ ಕಾರ್ಮಿಕರದ್ದಾಗಿದೆ. ಅದಕ್ಕಾಗಿ ಸರ್ಕಾರಗಳು ಕಟ್ಟಡ ಕಾರ್ಮಿಕರ ಕುಂದು ಕೊರತೆ ಪರಿಹರಿಸಿ, ಕಾರ್ಮಿಕ ಕಾರ್ಡ್ ನೀಡಬೇಕು. ಕಾರ್ಮಿಕರ ಅಭಿವೃದ್ಧಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರ ಬಹಳ ಮುಖ್ಯವಾಗಿದೆ. ಶಿಕ್ಷಣ ಎಂಬ ಅಸ್ತçದಿಂದ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದ್ದ್ಉ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸರ್ಕಾರ ಪೌರ ಕಾರ್ಮಿಕರಿಗೆ ₹ 5 ಲಕ್ಷದ ವರೆಗೆ ಉಚಿತ ವಿಮೆ ಯೋಜನೆ ನೀಡುತ್ತಿದೆ ಎಂದು ತಿಳಿಸಿದರು.
ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜು ಮಾತನಾಡಿ, ಮನೆ ನಿರ್ಮಾಣ ಮಾಡುವ ವಸ್ತುಗಳ ಮೇಲೆ ಶೇ 37ರಷ್ಟು ತೆರಿಗೆ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಇಂತಹ ಕಾರ್ಮಿಕರಿಗೆ ಸರ್ಕಾರ ಕ್ಷೇಮನಿಧಿ ಸ್ಥಾಪಿಸಬೇಕು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಪುಟ್ಟಸ್ವಾಮಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಬೆಳ್ಳಿಯಪ್ಪ, ಅರಕಲವಾಡಿ ನಾಗೇಂದ್ರ, ಗ್ರಾಮಪಂಚಾಯಿತಿ ಸದಸ್ಯರಾದ ರವಳಯ್ಯ, ಪದ್ಮ, ಮುಖಂಡರಾದ ಶಿವಕುಮಾರ್, ಸಿದ್ದರಾಜು, ಪ್ರಕಾಶ್, ಮಹದೇವಸ್ವಾಮಿ, ಬಸವರಾಜು, ಸಂತೋಷ್, ಪ್ರಸನ್ನ, ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್, ಅಧ್ಯಕ್ಷ ಸಿದ್ದಯ್ಯ, ಖಜಾಂಚಿ ಪ್ರಸನ್ನ , ಕಾರ್ಮಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.