ADVERTISEMENT

ತಹಶೀಲ್ದಾರ್‌ ಸಹಿ ನಕಲು, ಎಸ್‌ಡಿಎ ಅಮಾನತು

ಹಣದ ಆಸೆಗೆ ಹಿಂದಿನ ತಹಶೀಲ್ದಾರ್‌ ಸಹಿಯ ದುರ್ಬಳಕೆ ಮಾಡಿದ ಅಬ್ದುಲ್‌ ಮುಜಾಹಿದ್‌

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 16:37 IST
Last Updated 1 ಅಕ್ಟೋಬರ್ 2020, 16:37 IST
ಚಾಮರಾಜನಗರ ತಹಶೀಲ್ದಾರ್‌ ಕಚೇರಿ
ಚಾಮರಾಜನಗರ ತಹಶೀಲ್ದಾರ್‌ ಕಚೇರಿ   

ಚಾಮರಾಜನಗರ: ಹಣದ ಆಸೆಗಾಗಿ ತಹಶೀಲ್ದಾರ್ ಸಹಿಯನ್ನೇ ನಕಲು ಮಾಡಿ ಅರ್ಜಿದಾರರೊಬ್ಬರಿಗೆ ಹಕ್ಕುಪತ್ರ ನೀಡಿದ್ದ ಇಲ್ಲಿನ ತಹಶೀಲ್ದಾರ್‌ ಕಚೇರಿಯ ದ್ವಿತೀಯ ದರ್ಜೆ ಸಹಾಯಕರೊಬ್ಬರನ್ನು (ಎಸ್‌ಡಿಎ) ಸೇವೆಯಿಂದ ಅಮಾನತು ಮಾಡಲಾಗಿದೆ.

ವಾರದ ಹಿಂದೆಯೇ ಅಮಾನತು ಆದೇಶ ಬಂದಿದ್ದು, ಪ್ರಕರಣ ಈಗ ಬೆಳಕಿಗೆ ಬಂದಿದೆ. ಅಬ್ದುಲ್‌ ಮುಜಾಹಿದ್‌ ಅಮಾನತುಗೊಂಡವರು.ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಗೊತ್ತಾಗಿದೆ.

ಅಮಾನತು ಆಗಿರುವುದನ್ನು ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ ಅವರು ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

ADVERTISEMENT

ಹಿಂದಿನ ತಹಶೀಲ್ದಾರ್‌ ಸಹಿ ನಕಲು: ತಾಲ್ಲೂಕಿನಕಾಡಹಳ್ಳಿಯ ಮಹದೇವಸ್ವಾಮಿ ಎಂಬುವವರು ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿದ್ದರು. ಅದನ್ನು ಸಕ್ರಮಗೊಳಿಸಿ, ಹಕ್ಕು ಪತ್ರ ಪಡೆಯುವುದಕ್ಕಾಗಿ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ದ್ವಿತೀಯ ದರ್ಜೆ ಸಹಾಯಕರಾಗಿದ್ದ ಅಬ್ದುಲ್ ಮುಜಾಹಿದ್ ಅವರು ಹಕ್ಕು ಪತ್ರಕ್ಕೆ ತಹಶೀಲ್ದಾರ್ ಸಹಿ ಹಾಕಿಸಿಕೊಡುವುದಾಗಿ ಅರ್ಜಿದಾರರಿಂದ ಹಣಪಡೆದಿದ್ದರು ಎನ್ನಲಾಗಿದೆ.

ಹಕ್ಕು ಪತ್ರಕ್ಕಾಗಿ ಪದೇ ಪದೇ ಕಚೇರಿಗೆ ಬರುತ್ತಿದ್ದ ಮಹದೇವಸ್ವಾಮಿ ಅವರು ಒತ್ತಡ ಹಾಕುತ್ತಿದ್ದುದರಿಂದ, ಮುಜಾಹಿದ್‌ ಅವರು ಅರ್ಜಿಗೆ ಸಂಬಂಧಿಸಿದಂತೆ ಕಡತ ತಯಾರಿಸಿ ಹಿಂದಿನ ತಹಶೀಲ್ದಾರ್‌ ಮಹೇಶ್‌ ಅವರ ನಕಲಿ ಸಹಿ ಹಾಕಿ ಹಕ್ಕುಪತ್ರ ನೀಡಿದ್ದರು ಎಂದು ಹೇಳಲಾಗಿದೆ.

ಹಕ್ಕುಪತ್ರದಲ್ಲಿ ಹಿಂದಿನ ತಹಶೀಲ್ದಾರ್‌ ಅವರ ಹೆಸರಿನಲ್ಲಿ ಸಹಿ ಇರುವುದನ್ನು ಕಂಡು ಅನುಮಾನಗೊಂಡ ಮಹದೇವಸ್ವಾಮಿ ಅವರು ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ ಅವರಿಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಅಬ್ದುಲ್‌ ಮುಜಾಹಿದ್‌ ಅವರು ನಕಲಿ ಸಹಿ ಮಾಡಿ ಹಕ್ಕುಪತ್ರ ನೀಡಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್‌ ಅವರು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ವರದಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.