ADVERTISEMENT

ರಾಜ್ಯ ಸರ್ಕಾರದ ವಿರುದ್ಧ ಅಂಚೆ ಪತ್ರ ಚಳವಳಿ

ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಎಸ್‌ಡಿಪಿಐ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮೇ 2022, 16:12 IST
Last Updated 6 ಮೇ 2022, 16:12 IST
ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಪದಾಧಿಕಾರಿಗಳು ಶುಕ್ರವಾರ ಚಾಮರಾಜನಗರದಲ್ಲಿ ಅಂಚೆ ಪತ್ರ ಚಳವಳಿ ನಡೆಸಿದರು
ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಪದಾಧಿಕಾರಿಗಳು ಶುಕ್ರವಾರ ಚಾಮರಾಜನಗರದಲ್ಲಿ ಅಂಚೆ ಪತ್ರ ಚಳವಳಿ ನಡೆಸಿದರು   

ಚಾಮರಾಜನಗರ: ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯದ ಬಿಜೆಪಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಅಂಚೆ ಪತ್ರ ಚಳವಳಿ ನಡೆಸಿದರು.

ತಮ್ಮ ಬೇಡಿಕೆ ಬರೆದಿರುವ ಪತ್ರಗಳನ್ನು ರಾಷ್ಟ್ರಪತಿ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿದರು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ರಾರ್‌ಅಹಮದ್‌ ಮಾತನಾಡಿ ‘ರಾಜ್ಯದಲ್ಲಿ ಲಂಚ ನೀಡದೆ ಯಾವುದೇ ಸಾರ್ವಜನಿಕ ಕೆಲಸ ಆಗುವುದಿಲ್ಲ ಎನ್ನುವುದಕ್ಕೆ ಈಶ್ವರಪ್ಪ ರಾಜೀನಾಮೆಯೇ ಸಾಕ್ಷಿ. ಮಿತಿ ಮೀರಿ ಭ್ರಷ್ಟಾಚಾರ ನಡೆಯುತ್ತಿದೆ. ಕರ್ನಾಟಕದಲ್ಲಿ ಸರ್ಕಾರಿ ಕೆಲಸಕ್ಕೆ ಶೇಕಡಾ 40ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ. ಇದರಿಂದ ದೇಶದಾದ್ಯಂತ ನಮ್ಮ ರಾಜ್ಯದ ಮಾನ ಹರಾಜು ಆಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಮಿತಿ ಮೀರಿದ ಭ್ರಷ್ಟಾಚಾರ ಮತ್ತು ಕೋಮುವಾದದ ಮಧ್ಯೆ ಸಿಲುಕಿಕೊಂಡಿರುವ ಜನಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ. ರಾಜ್ಯದಲ್ಲಿ ಶಾಂತಿ ಮತ್ತು ಕಾನೂನುಸುವ್ಯವಸ್ಥೆ ಹಾಳಾಗಿದೆ. ಕೋಮುವಾದಿ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರ ಮೇಲಿರುವ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್‌ ಪಡೆದಿರುವ ರಾಜ್ಯ ಸರ್ಕಾರ ಕಿಡಿಗೇಡಿಗಳಿಗೆ ಪ್ರೋತ್ಸಾಹ ನೀಡಿರುವುದರಿಂದ ಶೋಚನೀಯ ಸ್ಥಿತಿ ಉದ್ಭವವಾಗಿದೆ. ಇದರಿಂದ ನೇರವಾಗಿ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಹಾಗಾಗಿ, ಭ್ರಷ್ಟ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಆರೀಫ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೈಯದ್ ಇರ್ಫಾನ್, ಜಿಲ್ಲಾ ಕಾರ್ಯದರ್ಶಿ ಜಬೀ ನೂರ್, ಜಿಲ್ಲಾ ಖಜಾಂಚಿ ಸೈಯದ್ ನಯಾಜ್, ನಗರಸಭೆ ಸದಸ್ಯರಾದ ಕಲೀಲ್ ಉಲ್ಲಾ, ಅಫ್ಸರ್ ಪಾಷ, ಜಿಲ್ಲಾ ಸಮಿತಿ ಸದಸ್ಯ ಇಸ್ರಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.