ADVERTISEMENT

ಚಾಮರಾಜನಗರ: 24 ಗಂಟೆಗಳಲ್ಲಿ 17 ಸಾವು

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 16:11 IST
Last Updated 2 ಜೂನ್ 2021, 16:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಮೂರ್ನಾಲ್ಕು ದಿನಗಳಿಂದ ಇಳಿಮುಖವಾಗಿದ್ದ ಕೋವಿಡ್‌ ರೋಗಿಗಳ ಸಾವಿನ ಸಂಖ್ಯೆ ಬುಧವಾರ ಏರಿಕೆ ಕಂಡಿದೆ.

ಜಿಲ್ಲಾಡಳಿತದ ನೀಡಿರುವ ಅಂಕಿ ಅಂಶಗಳ ಪ್ರಕಾರ, ಮಂಗಳವಾರ ಸಂಜೆ ಆರು ಗಂಟೆಯಿಂದ ಬುಧವಾರ ಸಂಜೆ ಆರು ಗಂಟೆವರೆಗಿನ 24 ಗಂಟೆಗಳ ಅವಧಿಯಲ್ಲಿ 17 ಜನರು ಮೃತಪಟ್ಟಿದ್ದಾರೆ. ಈ ಪೈಕಿ 10 ಮಂದಿ ಕೋವಿಡ್‌ನಿಂದ ಹಾಗೂ ಏಳು ಮಂದಿ ಕೋವಿಡ್‌ಯೇತರ ಕಾರಣಗಳಿಂದ ಕೊನೆಯುಸಿರೆಳೆದಿದ್ದಾರೆ. ಜಿಲ್ಲಾಡಳಿತ ಪ್ರತಿ ದಿನ ಸಂಜೆ ನೀಡುವ ಕೋವಿಡ್‌ಗೆ ಸಂಬಂಧಿಸಿದ ವರದಿಯಲ್ಲಿ ನಾಲ್ಕು ಸಾವಿನ ಪ್ರಕರಣಗಳು ಪ್ರಸ್ತಾಪಿಸಿದೆ.

ಈ ಮಧ್ಯೆ, ಬುಧವಾರ ಜಿಲ್ಲೆಯಲ್ಲಿ 208 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 163 ಮಂದಿ ಗುಣಮುಖರಾಗಿದ್ದಾರೆ. 2,835 ಸಕ್ರಿಯ ಪ್ರಕರಣಗಳು ಇವೆ. 57 ಮಂದಿ ಐಸಿಯುನಲ್ಲಿದ್ದು, 534 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಆಸ್ಪತ್ರೆ ಹಾಗೂ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

1,654 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, ಈ ಪೈಕಿ 1,274 ವರದಿಗಳು ನೆಗೆಟಿವ್‌ ಬಂದು, 380 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಆದರೆ, 172 ಪ್ರಕರಣಗಳನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿರುವುದರಿಂದ 208 ಪ್ರಕರಣಗಳ ಲೆಕ್ಕವನ್ನು ಮಾತ್ರ ಜಿಲ್ಲಾಡಳಿತ ನೀಡಿದೆ.

ಸೋಂಕಿತ 208 ಜನರಲ್ಲಿ ಚಾಮರಾಜನಗರ ತಾಲ್ಲೂಕಿನ 81, ಗುಂಡ್ಲುಪೇಟೆ ತಾಲ್ಲೂಕಿನ 28, ಕೊಳ್ಳೇಗಾಲದ 24, ಹನೂರಿನ 47, ಯಳಂದೂರು ತಾಲ್ಲೂಕಿನ 15 ಜನರಿದ್ದಾರೆ. ಹೊರ ಜಿಲ್ಲೆ/ರಾಜ್ಯಕ್ಕೆ ಸೇರಿದವರು ಮೂವರಿದ್ದಾರೆ.

ಬುಧವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 27 ಸಾವಿರ ದಾಟಿದ್ದು, ಇದುವರೆಗೆ 27,064 ಮಂದಿಗೆ ಸೋಂಕು ತಗುಲಿದೆ. 23,788 ಮಂದಿ ಗುಣಮುಖರಾಗಿದ್ದಾರೆ. ಬುಧವಾರ ಗುಣಮುಖರಾದ 163 ಜನರ ಪೈಕಿ, ಆಸ್ಪತ್ರೆಯಿಂದ ಐವರು ಮನೆಗೆ ತೆರಳಿದ್ದಾರೆ. ಮನೆ ಆರೈಕೆಯಲ್ಲಿದ್ದ 158 ಮಂದಿ ಸೋಂಕು ಮುಕ್ತರಾಗಿದ್ದಾರೆ.

ಚಾಮರಾಜನಗರ ತಾಲ್ಲೂಕಿನ 57, ಗುಂಡ್ಲುಪೇಟೆಯ 19, ಕೊಳ್ಳೇಗಾಲದ 28, ಹನೂರಿನ 46 ಮತ್ತು ಯಳಂದೂರು ತಾಲ್ಲೂಕಿನ 9 ಮಂದಿ ಗುಣಮುಖರಾಗಿದ್ದಾರೆ. ಹೊರ ಜಿಲ್ಲೆಗೆ ಸೇರಿರುವ ನಾಲ್ವರು ಸೋಂಕುಮುಕ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.