ಚಾಮರಾಜನಗರ: ಗುರು ಪರಂಪರೆಯ ಮೂಲಕ ಭಾರತೀಯ ಧರ್ಮ, ಸಂಸ್ಕೃತಿ, ಆಧ್ಯಾತ್ಮ ಶಕ್ತಿಯನ್ನು ಜಗತ್ತಿಗೆ ನೀಡುತ್ತಿರುವ ಶೃಂಗೇರಿ ಪರಂಪರೆಯ ಕಾರ್ಯ ಮಹೋನ್ನತವಾದದ್ದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಸುರೇಶ್ ಎನ್.ಋಗ್ವೇದಿ ಹೇಳಿದರು.
ನಗರದ ಋಗ್ವೇದಿ ಕುಟೀರದಲ್ಲಿ ಶ್ರೀಶಂಕರ ಅಭಿಯಾನ, ಋಗ್ವೇದಿ ಯೂತ್ ಕ್ಲಬ್, ಶಾರದಾ ಭಜನಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶೃಂಗೇರಿಯ ವಿಧುಶೇಖರ ಭಾರತಿ ಸ್ವಾಮೀಜಿಗಳ ವರ್ಧಂತಿ ಕಾರ್ಯಕ್ರಮದಲ್ಲಿ ಶೃಂಗೇರಿ ಗುರುಪರಂಪರೆ ಕುರಿತು ಉಪನ್ಯಾಸ ನೀಡಿದ ಅವರು, ಶಂಕರಾಚಾರ್ಯರು ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ ವೇದ, ಉಪನಿಷತ್ತು, ಮಹಾಕಾವ್ಯಗಳು, ವೈದಿಕ ಸಾಹಿತ್ಯದ ಅರ್ಥವನ್ನು ಜಗತ್ತಿಗೆ ಪ್ರಚುರಪಡಿಸಿದರು.
ಸಾಹಿತ್ಯದ ಮೂಲಕ ಮಾನವನ ಜ್ಞಾನ ಶಕ್ತಿಯನ್ನು ಪಸರಿಸುವ ಶ್ರೇಷ್ಠ ಕಾರ್ಯವನ್ನು ಆದಿಶಂಕರರು ಮಾಡಿದ್ದಾರೆ. ಸಾವಿರದ ಮುನ್ನೂರು ವರ್ಷಗಳ ಹಿಂದೆ ಶೃಂಗೇರಿಯಲ್ಲಿ ಸ್ಥಾಪಿತವಾದ ಶಾರದಾ ಪೀಠ ಅವಿಚ್ಛಿನ್ನ ಶ್ರೇಷ್ಠ ಗುರುಪರಂಪರೆ ಹೊಂದಿದೆ. ಭಾರತಿ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಸನಾತನ ಧರ್ಮದ ಉಳಿವು ಮತ್ತು ಸಾರವನ್ನು ಪ್ರತಿಯೊಬ್ಬರಿಗೂ ಪರಿಚಯಿಸುತ್ತಿದೆ ಎಂದರು.
ವಿದುಶೇಖರ ಸ್ವಾಮೀಜಿ ದೇಶದಾದ್ಯಂತ ವಿಜಯಯಾತ್ರೆಯ ಮೂಲಕ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ. ಅವರ 33ನೇ ವರ್ಧಂತಿ ಸಂದರ್ಭದಲ್ಲಿ ಶಂಕರರ ತತ್ವಗಳು, ವಿಚಾರಧಾರೆಗಳು ಎಲ್ಲಡೆ ಪಸರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾರದಾ ಅಭಿಯಾನದ ವತ್ಸಲಾ ರಾಜಗೋಪಾಲ್, ರವಿ, ಭಜನಾ ಮಂಡಳಿಯ ಮಾಲಾ, ಕುಸುಮ ಋಗ್ವೇದಿ, ಯೂತ್ ಕ್ಲಬ್ ಅಧ್ಯಕ್ಷೆ ಶರಣ್ಯ, ವಿಜಯಲಕ್ಷ್ಮಿ, ಸರಸ್ವತಿ ವಾಣಿಶ್ರೀ, ಪೂರ್ಣಿಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.