
ಗುಂಡ್ಲುಪೇಟೆ: ಸಿದ್ದರಾಮಯ್ಯ ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ ನಿಮಿತ್ತ ಪಟ್ಟಣದಲ್ಲಿ 2 ಸಾವಿರ ಮಂದಿಗೆ ನಾಟಿಕೋಳಿ ಬಿರಿಯಾನಿ ವಿತರಿಸಲಾಯಿತು.
ನಿರ್ಮಾಣ ಹಂತದಲ್ಲಿರುವ ಕನಕ ಭವನದ ಮುಂಭಾಗ ತಾಲ್ಲೂಕು ಕುರುಬ ಸಮುದಾಯ ಹಾಗೂ ಅಹಿಂದ ವರ್ಗದವರು ಪೆಂಡಾಲ್ ಹಾಕಿ ನಾಟಿ ಕೋಳಿ ಬಿರಿಯಾನಿ ತಯಾರಿಸಿ ವಿತರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಜಯ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.
ಕುರುಬ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಎಲ್.ರಾಜು ಮಾತನಾಡಿ, ‘ಅಹಿಂದ ಮತ್ತು ಜಾತ್ಯತೀತ ನಾಯಕರಾಗಿರುವ ಸಿದ್ದರಾಮಯ್ಯ ಅವರು ಡಿ.ದೇವರಾಜ ಅರಸು ದಾಖಲೆ ಮುರಿದು ದೀರ್ಫಾವಧಿ ಸಿ.ಎಂ. ಎಂದು ದಾಖಲೆ ನಿರ್ಮಿಸಿರುವುದು ಸಂತಸದ ವಿಚಾರ. ‘ಅನ್ನಭಾಗ್ಯ’ ಕೊಟ್ಟು ರಾಜ್ಯದ ಜನರ ಹಸಿವು ನೀಗಿಸಿರುವ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಪೂರ್ಣಾವಧಿ ಸಿಎಂ ಆಗಿ ಮುಂದುವರೆಯಬೇಕು. 2028ರ ಚುನಾವಣೆಯು ಅವರ ನೇತೃತ್ವದಲ್ಲಿಯೇ ನಡೆಯಬೇಕು’ ಎಂದು ಹೇಳಿದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿ, ‘ಬಡವರ ಆಶಾಕಿರಣ ಸಿದ್ದರಾಮಯ್ಯ ಅಹಿಂದ ನಾಯಕರಾಗಿ ಜನಮನ್ನಣೆ ಗಳಿಸಿದ್ದಾರೆ. ಅವರು ಐದು ವರ್ಷ ಮುಖ್ಯಮಂತ್ರಿ ಸ್ಥಾನ ಪೂರೈಸಬೇಕು ಎಂಬುದು ಜನರ ಅಭಿಲಾಷೆಯಾಗಿದೆ. ಹೈಕಮಾಂಡ್ ಕೂಡ ಐದು ವರ್ಷ ಅಧಿಕಾರ ಪೂರೈಸಲು ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಸಮುದಾಯದ ಮುಖಂಡ ಎಚ್.ಎನ್ ಬಸವರಾಜು ಮಾತನಾಡಿ, ‘ಸರ್ವರ ಹಿತ ಕಾಯುವ ರಾಜಕಾರಣಿ ಎಂದರೆ ಅದು ಸಿದ್ದರಾಮಯ್ಯ, ಚಾಮರಾಜನಗರ ಜಿಲ್ಲೆಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಭಯದಲ್ಲಿ ಜಿಲ್ಲೆಗೆ ಬರಲು ಹೆದರುತ್ತಿದ್ದರು, ಅಧಿಕಾರ ಹೋದರೂ ಸರಿ ಎಂದು ಜಿಲ್ಲೆಗೆ ಕಾಲಿಟ್ಟ ನಾಯಕ’ ಎಂದು ವರ್ಣಿಸಿದರು.
ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಮಡಹಳ್ಳಿ ಸರ್ಕಲ್ ಬಳಿಯಿರುವ ಕನಕ ವೃತ್ತದಿಂದ ಊಟಿ ರಸ್ತೆಯ ಕನಕ ಭವನದವರೆಗೆ ಸಿದ್ದರಾಮಯ್ಯ ಭಾವಚಿತ್ರ ಪ್ರದರ್ಶಿಸಿ ರ್ಯಾಲಿ ನಡೆಸಲಾಯಿತು.
ಹೊಸೂರು ಬಸವರಾಜು, ಹೊಸೂರು ಶಿವಣ್ಣ, ನಾಗರಾಜು, ಗೋವಿಂದು, ಪೈ.ಚಿಕ್ಕಣ್ಣ, ರಾಜೀವ, ರಘು, ಸಾಗರ್, ಸಂದೀಪ್ ಕುಮಾರ್ ಜಿ.ಎಸ್, ನಾಗೇಂದ್ರ ಮರಿಯಪ್ಪ, ವಿಶ್ವಾಸ್, ಮಂಜುನಾಥ್, ಮನು, ಪ್ರಮೋದ್ ಕವ್ವ, ಮಲ್ಲಯ್ಯನಪುರ ಶಶಿಕುಮಾರ್, ಮಹದೇವ, ಮಲ್ಲೇಶ್ ಗರಗನಹಳ್ಳಿ, ಅರುಣ್ ಗೌಡ, ಕಲ್ಲಿಗೌಡನಹಳ್ಳಿ ಬಸವರಾಜು, ಮಡಹಳ್ಳಿ ಮಣಿ, ಸಾಹುಲ್ ಹಮೀದ್, ಪುನೀತ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.