ADVERTISEMENT

ಆಧ್ಯಾತ್ಮಿಕ ವೈಚಾರಿಕ ಕ್ರಾಂತಿ ಹುಟ್ಟುಹಾಕಿದ ಅಪ್ಪಣ್ಣ

ಜಿಲ್ಲಾಡಳಿತದ ವತಿಯಿಂದ ಹಡಪದ ಅಪ್ಪಣ್ಣ ಜಯಂತಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 7:39 IST
Last Updated 30 ಜುಲೈ 2025, 7:39 IST
ಚಾಮರಾಜನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಉದ್ಘಾಟಿಸಿದರು
ಚಾಮರಾಜನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಉದ್ಘಾಟಿಸಿದರು   

ಚಾಮರಾಜನಗರ: ವಚನಗಳ ಮೂಲಕವೇ ಸಮಾಜದಲ್ಲಿ ಬೇರೂರಿದ್ದ ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರಗಳ ವಿರುದ್ದ ಜಾನಜಾಗೃತಿ ಮೂಡಿಸಿದವರು ಹಡಪದ ಅಪ್ಪಣ್ಣ ಎಂದು ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ ಅಭಿಪ್ರಾಯಪಟ್ಟರು.

ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು ಹಡಪದ ಅಪ್ಪಣ್ಣ 12ನೇ ಶತಮಾನದಲ್ಲಿ ಸರಳ ವಚನಗಳ ರಚನೆ ಮೂಲಕ ಅಸ್ಪೃಶ್ಯತೆ ವಿರುದ್ದ ಜಾಗೃತಿ ಮೂಡಿಸಿದರು. ಸಮಸಮಾಜ ನಿರ್ಮಾಣಕ್ಕೆ ಬಸವಣ್ಣನವರೊಂದಿಗೆ ದುಡಿದವರು.

ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ 250 ವಚನಗಳನ್ನು ರಚಿಸಿದ್ದಾರೆ. ಸರಳ, ಮಿತಭಾಷಿ, ಸಜ್ಜನಿಕೆಯ ಮೇರು ವ್ಯಕ್ತಿತ್ವದ ಅಪ್ಪಣ್ಣ ಸಮಾಜಕ್ಕೆ ದಾರಿದೀಪ ಎಂದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ 12ನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಹಡಪದ ಅಪ್ಪಣ್ಣ ಅಗ್ರಗಣ್ಯರು. ಧಾರ್ಮಿಕ, ಪ್ರಗತಿಪರ, ಆಧ್ಯಾತ್ಮಿಕ ಹಾಗೂ ವೈಚಾರಿಕ ಕ್ರಾಂತಿ ಹುಟ್ಟುಹಾಕಿ ನವ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ 12ನೇ ಶತಮಾನದಲ್ಲಿ ಸಮಾನ ಮನಸ್ಕ ಶಿವಶರಣರು ಅನುಭವ ಮಂಟಪ ಕಟ್ಟಿ ಸಕಲ ಜೀವರಾಶಿಗಳಿಗೂ ಒಳಿತು ಬಯಸುವ ಕೆಲಸ ಮಾಡಿದರು.

ಜಾತೀಯತೆ, ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ನಿಜವಾದ ಪ್ರಜಾಪ್ರಭುತ್ವ ಸೃಷ್ಠಿಸಿದರು. ಜನರಿಗೆ ಅರ್ಥವಾಗುವಂತೆ ಸರಳ ವಚನಗಳ ರಚಿಸಿ ಜಾತಿಪದ್ದತಿ ನಿರ್ಮೂಲನೆಗೆ ಭದ್ರಬುನಾದಿ ಹಾಕಿದರು ಎಂದರು.

ವಿಚಾರವಾದಿ ಅರಕಲವಾಡಿ ನಾಗೇಂದ್ರ ಮಾತನಾಡಿ, ಅನುಭವ ಮಂಟಪದಲ್ಲಿ ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ಅಂತಿಮ ಕಾಲದವರೆಗೂ ಜೊತೆಯಾಗಿದ್ದರು. ಅನುಭವ ಮಂಟಪದಲ್ಲಿ ಎಲ್ಲರಿಗೂ ಪ್ರಿಯವಾಗಿದ್ದರು. ಅನುಭವ ಮಂಟಪಕ್ಕೆ ಬಂದವರು ಮೊದಲು ಹಡಪದ ಅಪ್ಪಣ್ಣ ಅವರನ್ನು ಭೇಟಿಯಾಗಬೇಕು ಎಂಬ ಷರತ್ತು ಇತ್ತು ಎಂದರು.

ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮಾತನಾಡಿ ಸಮುದಾಯದ ಅಭಿವೃದ್ಧಿಗೆ ನಗರದ ಹೊರವಲಯದಲ್ಲಿರುವ ಯಡಪುರದಲ್ಲಿ ಆಶ್ರಯ ನಿವೇಶನ ನೀಡಲು ಶಾಸಕರಿಗೆ ಒತ್ತಾಯಿಸಲಾಗುವುದು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವೆಂಕಟರಾಜು, ಚಾಮರಾಜನಗರ ಅಧ್ಯಕ್ಷ ಬಸವಣ್ಣ, ಗುಂಡ್ಲುಪೇಟೆ ಅಧ್ಯಕ್ಷ ವಿಠಲ, ಯಳಂದೂರು ಅಧ್ಯಕ್ಷ ಶ್ರೀಕಂಠಸ್ವಾಮಿ, ಕೊಳ್ಳೇಗಾಲ ಅಧ್ಯಕ್ಷ ರಾಚಪ್ಪಾಜಿ, ಮಹಿಳಾ ಘಟಕದ ಅಧ್ಯಕ್ಷೆ ದೊಡ್ಡತಾಯಮ್ಮ ಕಾರ್ಯಕ್ರಮದಲ್ಲಿ ಇದ್ದರು.

ಸಮಾಜ ತಿದ್ದಿದ ಅಪ್ಪಣ್ಣ

ಹಡಪದ ಎಂದರೇ ತಾಂಬೂಲದ ಚೀಲ ಅಥವಾ ಕ್ಷೌರದ ಚೀಲ ಎಂಬ ಅರ್ಥವಿದೆ. ಬಸವಣ್ಣನವರು ಪ್ರೀತಿಯಿಂದ ಅಪ್ಪಿಕೊಂಡದ್ದಕ್ಕೂ ಅಪ್ಪಣ್ಣ ಎಂಬ ಹೆಸರು ಬಂತು ಎನ್ನಲಾಗುತ್ತದೆ. ಸಮಾಜವನ್ನು ವಿಡಂಬನಾತ್ಮಕವಾಗಿ ತಿದ್ದುವಂತಹ ವಚನಗಳನ್ನು ರಚಿಸಿರುವ ಹಪ್ಪಣ್ಣ ವಚನ ಚಳವಳಿ ಹುಟ್ಟುಹಾಕಿದವರ ಪೈಕಿ ಪ್ರಮುಖರು.ವಚನಗಳಲ್ಲಿ ಬದುಕು ಭವಿಷ್ಯ ಸಂಸ್ಕಾರಗಳಿದ್ದು ಮುಂದಿನ ತಲೆಮಾರಿಗೆ ತಿಳಿಸಿ ಕೊಡಬೇಕಾಗಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆದು ಗೌರವಯುತವಾಗಿ ಜೀವನ ಕಟ್ಟಿಕೊಳ್ಳಬೇಕು ಎಂದು ಅರಕಲವಾಡಿ ನಾಗೇಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.