ADVERTISEMENT

ಬಿಳಿಗಿರಿರಂಗನ ಬೆಟ್ಟದಲ್ಲಿ ವಿಜ್ಞಾನಿಗಳ ಗಮನ ಸೆಳೆದಿದೆ ‘ಬದನಣ್ಣು’

ಗುಣಮಟ್ಟದ ತರಕಾರಿ ಕೃಷಿಗೆ ಹೊಸ ಪ್ರಯೋಗ, ಅಧ್ಯಯನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 14:11 IST
Last Updated 5 ಫೆಬ್ರುವರಿ 2020, 14:11 IST
ಬಿಳಿರಂಗನಬೆಟ್ಟದಲ್ಲಿ ಕಂಡು ಬಂದ ಬದನಣ್ಣು
ಬಿಳಿರಂಗನಬೆಟ್ಟದಲ್ಲಿ ಕಂಡು ಬಂದ ಬದನಣ್ಣು   

ಯಳಂದೂರು:‌ ಬಿಳಿಗಿರಿ ರಂಗನಬೆಟ್ಟದಲ್ಲಿ ನೈಸರ್ಗಿಕವಾಗಿ ದೊರೆಯುತ್ತಿರುವ ಅತ್ತ ಬದನೆಯೂ ಅಲ್ಲದ, ಇತ್ತ ಟೊಮೆಟೊ ಅಲ್ಲದ ಹಣ್ಣು ಈಗ ತೋಟಗಾರಿಕಾ ವಿಜ್ಞಾನಿಗಳ ಗಮನ ಸೆಳೆದಿದೆ.

ಈ ಹಣ್ಣನ್ನುಸೋಲಿಗರು ‘ಬದನಣ್ಣು’ ಎಂದುಕರೆಯುತ್ತಾರೆ. ಇದು ಬದನೆಯಂತೆ ಗುಂಡಗೂ, ಟೊಮೆಟೊನಂತೆ ಮೃದುವಾಗಿಯೂ ಇದೆ. ಮಾಗಿದಾಗ ತಿನ್ನಬಹುದು. ಬದನೆ–ಟೊಮೆಟೊ ಎರಡರ ಗುಣಲಕ್ಷಣಗಳೂ ಇದರಲ್ಲಿದೆ. ಹಾಗಾಗಿ ಇದನ್ನು ‘ಬಟೊ’ ಎಂದು ಕರೆಯಲಾಗುತ್ತದೆ. ಈ ಹಣ್ಣು ವಿಜ್ಞಾನಿಗಳ ಗಮನ ಸೆಳೆದಿದ್ದು, ಇದನ್ನು ಇನ್ನಷ್ಟು ಪ್ರಮಾಣದಲ್ಲಿ ಬೆಳೆಸಲು ಅಧ್ಯಯನದಲ್ಲಿ ತೊಡಗಿದ್ದಾರೆ.

ಕಾಡು ಬದನೆ–ಟೊಮೆಟೊ ಗಿಡಗಳ ಸಂಯೋಜನೆಯಿಂದ ಹೊಸ ಬಗೆಯ ಚೆರ್ರಿ ಬಟೊ ಬೆಳೆಸುವ ಪ್ರಯೋಗ ಅಲ್ಲಲ್ಲಿ ನಡೆಯುತ್ತಿವೆ ಎಂದು ಹೇಳುತ್ತಾರೆ ವಿಜ್ಞಾನಿಗಳು.

ADVERTISEMENT

ಈ ಹಣ್ಣಿನ ಬಗ್ಗೆ ತೋಟಗಾರಿಕಾ ವಿಜ್ಞಾನಿಗಳು ಗಿರಿಜನರೊಂದಿಗೆ ಮಾತುಕತೆ ನಡೆಸಿ, ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ಹೊಸಪೋಡಿನ ಪುಟ್ಟರಂಗ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಳಿಗಿರಿ ರಂಗನಬೆಟ್ಟದ ಕಾನನದಲ್ಲಿ ನೂರಾರು ಸಸ್ಯ ಪ್ರಭೇದಗಳು ಇದ್ದು, ವಿಜ್ಞಾನಿಗಳು ಇಂತಹ ಸಸ್ಯ ವೈವಿಧ್ಯತೆಗಳ ತಳಿಗಳಿಂದ ತರಕಾರಿಗಳನ್ನು ಬೆಳೆಸುವ ಬಗ್ಗೆ ಸ್ಥಳೀಯರಿಗೆ ತರಬೇತಿ ನೀಡುತ್ತಿರುತ್ತಾರೆ.

ಅಪರೂಪದ ‘ಬಟೊ’ ಬೀಜಗಳನ್ನು ಸಂಗ್ರಹಿಸಿ, ಅವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವ ಬಗ್ಗೆ ಚಿಂತನೆಗಳೂ ನಡೆದಿವೆ. ಕಾಡು ಬದನೆ–ಟೊಮೆಟೊ ಗಿಡಗಳನ್ನು ಕಸಿ ಕಟ್ಟಿ, ‘ಬಟೊ’ ಬೆಳೆಯುವ ನಿಟ್ಟಿನಲ್ಲೂ ಯೋಚನೆ ನಡೆದಿದೆ.

‘ನೀರಿನ ಅಭಾವದಿಂದ ತರಕಾರಿವ್ಯವಸಾಯಗಾರರು ಕಡಿಮೆ ಆಗುತ್ತಿದ್ದಾರೆ. ಹೂ ಬಿಡುವ ಹಂತದಲ್ಲಿ ಕೀಟ ಹಾವಳಿಯಿಂದಸಸಿಗಳು ಒಣಗುತ್ತಿವೆ. ಕೀಟ ನಾಶಕ ಬಳಕೆ ಮಾಡಿದರೆ ಇಲ್ಲಿ ಬೆಳೆಸಿದ ತರಕಾರಿಸೇವಿಸುವವವರ ಸ್ವಾಸ್ಥ್ಯ ಹದಗೆಟ್ಟು, ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.ಹೀಗಾಗಿ, ರೋಗ ನಿರೋಧಕ ಶಕ್ತಿ ಹೆಚ್ಚು ಇರುವ ಸಸಿಗಳನ್ನು ಸಂಗ್ರಹಿಸಿ ಕಸಿ ಕಟ್ಟಿಬೆಳೆಸಿದರೆ ಪರಿಸರ ಸ್ನೇಹಿ ತರಕಾರಿಗಳನ್ನು ಪಡೆಯಬಹುದು’ ಎಂದು ಚಟ್ಟಹಳ್ಳಿತೋಟಗಾರಿಕಾ ಇಲಾಖೆಯ ಮುಖ್ಯಸ್ಥೆ ಡಾ.ಸುಮಂಗಲಿ ಅವರು ಹೇಳುತ್ತಾರೆ.

‘ಅರಣ್ಯಗಳಲ್ಲಿ ಬೆಳೆಯುವ ಬೆಳೆಗಳಿಗೆ ರೋಗ–ನಿರೋಧಕ ಹೆಚ್ಚು. ಇಲ್ಲಿನ ಕಾಡು ಬದನೆಗಿಡಗಳನ್ನು ಬೆಳೆಸಿ, ಅದಕ್ಕೆ ಟೊಮೆಟೊ ಅಥವಾ ಬೇರೆ ಯಾವುದೇ ತರಕಾರಿ ಗಿಡಗಳನ್ನು ಕಸಿ ಕಟ್ಟಿ ಕಾಯಿ–ಹಣ್ಣುಪಡೆಯಬಹುದು. ಸಂರಕ್ಷಿತ ಬೇಸಾಯದಲ್ಲಿ ಸಾಮಾನ್ಯವಾಗಿ ಒಂದು ಟೊಮೆಟೊ ಸಸಿ ಐದು ತಿಂಗಳುಫಲಕಚ್ಚುತ್ತದೆ. ಹೊಸ ವಿಧಾನವನ್ನು ಅಳವಡಿಸಿಕೊಂಡರೆ 10–12 ತಿಂಗಳು ಇಳುವರಿ ಪಡೆಯಲುಸಾಧ್ಯ. ಇಸ್ರೇಲ್‌ ಮತ್ತು ಜಪಾನ್‌ ಕೃಷಿ ತಾಂತ್ರಿಕತೆ ಇಂತಹ ಬೆಳೆಗಳಿಗೆ ಹೆಚ್ಚಿನಮನ್ನಣೆ ನೀಡುತ್ತವೆ. ಫಲವತ್ತತೆ ಕಳೆದುಕೊಂಡ ನೀರು–ನೆಲದಿಂದ ಈ ದೇಶಗಳು ಶೇ 99ಇಳುವರಿಯನ್ನು ಈ ಮಾದರಿಯಲ್ಲಿ ಪಡೆಯುತ್ತವೆ’ ಎಂದು ಅವರು ವಿವರಿಸುತ್ತಾರೆ.

ಅಲ್ಪ ನೀರಿನಲ್ಲಿ ಹೆಚ್ಚು ಇಳುವರಿ ಸಾಧ್ಯ’

‘ಗ್ರಾಮೀಣ ಭಾಗಗಳಲ್ಲಿ ತರಕಾರಿ ಬೆಳೆಯಲು ಹೆಚ್ಚು ನೀರು ಬಳಸುತ್ತಾರೆ. ಆದರೆ, ಟೊಮೆಟೊ ಮೇಲೆ ಕಸಿ ಮಾಡಿದ ಬದನೆ ಸಸಿಗಳಿಗೆ ಅಲ್ಪ ನೀರೇ ಸಾಕಾಗುತ್ತದೆ. ಇದಕ್ಕಾಗಿ ಹಸಿರುಮನೆಯಲ್ಲಿ ಕಾಡಿನ ತಳಿಗಳನ್ನು ಸಂಗ್ರಹಿಸಿ ಬೆಳೆಸಲಾಗುತ್ತದೆ. ಇದಕ್ಕಾಗಿಕಾಡಿನ ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆದಿರುವ ಬಟೊ ಸಸಿಗಳಿಂದ ಬೀಜ ಸಂಗ್ರಹಿಸಿ ಹೊಸ ಸಸಿ ಪಡೆಯುವ ಬಗ್ಗೆ ತೋಟಗಾರಿಕಾ ವಿಜ್ಞಾನಿಗಳು ಆಸಕ್ತಿ ತೋರುತ್ತಿದ್ದಾರೆ.ಈಗಾಗಲೇ ಇದಕ್ಕಾಗಿ ಸಿದ್ಧತೆ ನಡೆದಿದೆ’ ಎಂದು ಸಸ್ಯಸಂಶೋಧಕ ರಾಮಾಚಾರಿ ‘ಪ್ರಜಾವಾಣಿ’ಗೆತಿಳಿಸಿದರು.

ರೋಗ ನಿರೋಧಕ ಶಕ್ತಿ ಇರುವ ಅಡವಿ ಹಣ್ಣುಗಳಿಂದ ಮೂಲ ಗಿಡವನ್ನು ಬೆಳೆಸಿ, ಜತೆಗೆ ಬೇರೆಸಂಕುಲದ ತರಕಾರಿ ಗಿಡವನ್ನು ಕಸಿ ಕಟ್ಟಿದರೆ ಗುಣಮಟ್ಟದ ಕಾಯಿಪಲ್ಯ ಪಡೆಯಬಹುದು’ ಎಂದು ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.