ಯಳಂದೂರು: ಪಟ್ಟಣದ ಚಿಕ್ಕ ತಿರುಪತಿ ದೇವಾಲಯದಲ್ಲಿ ಶನಿವಾರ ಅನಂತ ಪದ್ಮನಾಭ ವ್ರತದ ನಿಮಿತ್ತ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಮುಂಜಾನೆ ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಬಣ್ಣದ ರಂಗೋಲಿ ಇಟ್ಟು, ಹೋಮ, ಹವನ, ಪೂಜೆ ಸಲ್ಲಿಸಲಾಯಿತು. ನಂತರ ದೇವರಿಗೆ ಹೂವಿನ ಹಾರಗಳ ಸಿಂಗಾರ ಮಾಡಿ ಲಕ್ಷ್ಮಿ, ಮಹಾಲಕ್ಷ್ಮಿ ಹಾಗೂ ಶ್ರೀನಿವಾಸನ ದೇವಳವನ್ನು ಭಕ್ತರಿಗೆ ದರ್ಶನಕ್ಕೆ ಮುಕ್ತಗೊಳಿಸಲಾಯಿತು. ಸರತಿ ಸಾಲಿನಲ್ಲಿ ನಿಂತು ಭಕ್ತರು ಪೂಜೆ ಪುನಸ್ಕಾರ ನೆರವೇರಿಸಿದರು.
ಅಷ್ಟ ಮಾತೃಕೆಯರ ಗುಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಹಣ್ಣು,ಕಾಯಿ ಅರ್ಪಿಸಿ, ಪೂಜೆ ಸಲ್ಲಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಹರಕೆ ಸಲ್ಲಿಸಿ, ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು.
ಅನಂತಪದ್ಮನಾಭ ವ್ರತದ ಹಿನ್ನೆಲೆಯಲ್ಲಿ ಸಂಜೆ ತನಕ ದೇವಾಯದಲ್ಲಿ ವೇದ ಮತ್ತು ಉಪನಿಷತ್ ಪಾರಾಯಣ ನಡೆಯಿತು. ಸಂಜೆ ಉತ್ಸವ ಮೂರ್ತಿಗಳನ್ನು ದೇವಳದ ಸುತ್ತಲೂ ಮೆರವಣಿಗೆ ಮಾಡಿ, ಮಹಾ ಮಂಗಳಾರತಿ ಪೂರೈಸಲಾಯಿತು ಎಂದು ಸುವರ್ಣ ತಿರುಮಲ ಶ್ರೀನಿವಾಸ ಟ್ರಸ್ಟ್ ಸದಸ್ಯ ಸಂತೋಷ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.