ಚಾಮರಾಜನಗರ: ಅಕ್ಷರ ಅನ್ನುವ ಬೆಳಕು ಮಕ್ಕಳನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಜಾನಪದ ವಿದ್ವಾಂಸ ಪ್ರೊ.ಕೃಷ್ಣಮೂರ್ತಿ ಹನೂರು ಸೋಮವಾರ ತಿಳಿಸಿದರು.
ನಗರದ ಸಿ.ಆರ್.ಕೆ.ಕಾಂಪ್ಲೆಕ್ಸ್ನಲ್ಲಿ ಅಭ್ಯಾಸಿ ಟ್ರಸ್ಟ್ ಹಮ್ಮಿಕೊಂಡಿದ್ದ ಅಭ್ಯಾಸಿ ಟ್ರಸ್ಟ್ ಕನ್ನಡ ಗ್ರಂಥಾಲಯ ಮತ್ತು ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅಕ್ಷರ ಮತ್ತು ಆಟಿಕೆಗಳು ಮಕ್ಕಳನ್ನು ಜೀವನದಲ್ಲಿ ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಹೀಗಾಗಿ ಮಕ್ಕಳು ಅಕ್ಷರ ಕಲಿಯುವ ಆಸಕ್ತಿ ಹೊಂದಿರಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರ ತರುವಂತಹ ಕೆಲಸಗಳು ನಡೆಯಬೇಕು. ಅಕ್ಷರ ಸಂಸ್ಕೃತಿ ಬೆಳೆಸಲು ಎಲ್ಲರೂ ಪ್ರಯತ್ನಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶರಾಜ್ ಮೇಹು ಮಾತನಾಡಿ, ‘ಮಕ್ಕಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿಕೊಂಡಿದ್ದೇ ಆದರೆ, ಏನು ಬೇಕಾದರೂ ಸಾಧಿಸಬಹುದು. ಮೊದಲು ಅನಕ್ಷರಸ್ಥರೇ ಸಿನಿಮಾ ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಇಂದು ಹೆಚ್ಚು ಓದಿದವರೂ ಸಿನಿಮಾ ಮತ್ತು ದೂರದರ್ಶನಗಳಿಗೆ ಬರುತ್ತಿದ್ದಾರೆ’ ಎಂದರು.
ಮೈಸೂರಿನ ರಂಗಕರ್ಮಿ ಯೋಗಾನಂದ ಅರಸೀಕರೆ ಮಾತನಾಡಿ, ‘ಮಕ್ಕಳನ್ನು ಸುಮ್ಮನೆ ಕೂರಿಸಿದರೆ ಅವರನ್ನು ಕಟ್ಟಿ ಹಾಕಿದಂತಾಗುತ್ತದೆ. ಮಕ್ಕಳಿಗೆ ಕಲಿಕೆ ಎಂದರೆ ತರಗತಿ ಒಳಗೆ ಮಾತ್ರ ಅಲ್ಲ, ಮುಕ್ತ ವಾತಾವರಣವನ್ನು ಅವರಿಗೆ ಕಲ್ಪಿಸಬೇಕು ಮತ್ತು ಅವರಲ್ಲಿ ಓದುವ ಗೀಳನ್ನು ಬೆಳೆಸಬೇಕು. ತೆಗೆ ಪೋಷಕರೂ ಮಕ್ಕಳಿಗೆ ಹೆಚ್ಚು ಸಮಯ ಕೊಡಬೇಕು’ ಎಂದು ಸಲಹೆ ನೀಡಿದರು.
ಅಭ್ಯಾಸಿ ಟ್ರಸ್ಟ್ನ ಎಸ್.ಕೆ.ಕಿರಣ್ ಕುಮಾರ್, ಪೋಷಕರು ಮಕ್ಕಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.