
ಕೊಳ್ಳೇಗಾಲ ಚಿಕ್ಕಲ್ಲೂರು ದೇವಸ್ಥಾನಕ್ಕೆ ಆಗಮಿಸಿದ ಸಂಸದ ಸುನಿಲ್ ಬೋಸ್ ಜಾಗಟೆ ಬಾರಿಸಿದರು
ಕೊಳ್ಳೇಗಾಲ: ತಾಲ್ಲೂಕಿನ ಚಿಕ್ಕಲ್ಲೂರು ಜಾತ್ರೆಯ ಕೊನೆಯ ದಿನವಾದ ಬುಧವಾರ ಸಂಸದ ಸುನೀಲ್ ಬೋಸ್ ಕ್ಷೇತ್ರಕ್ಕೆ ಭೇಟಿ ನೀಡಿ ಜಾತ್ರೆಯಲ್ಲಿ ಭಾಗವಹಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ದೇವಸ್ಥಾನದ ಭರತ್ ರಾಜೇ ಅರಸ್ ಹಾಗೂ ಜ್ಞಾನನಂದ ರಾಜೇ ಅರಸ್ ಟ್ರಸ್ಟ್ ವತಿಯಿಂದ ಸಂಸದರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಸುನೀಲ್ ಬೋಸ್, ‘ಚಿಕ್ಕಲ್ಲೂರು ಕ್ಷೇತ್ರದ ಅಭಿವೃದ್ಧಿ ಸಂಬಂಧ ಚಿಕ್ಕಲ್ಲೂರು ಕ್ಷೇತ್ರ ಪ್ರಾಧಿಕಾರ ರಚನೆ ಕುರಿತು ಸಂಬಂಧಪಟ್ಟವರ ಜೊತೆ ಮಾತನಾಡಲಾಗುವುದು. ಬಳಿಕ ಪ್ರಾಧಿಕಾರ ರಚನೆ ಮಾಡಬೇಕೋ ಬೇಡವೋ ಎಂಬ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.
ಹಿರಿಯ ಸಾಹಿತಿಗಳು, ಮಂಟೇಸ್ವಾಮಿ ಪರಂಪರೆ ಸಮಿತಿಯ ಪ್ರಮುಖರು ಹಾಗೂ ಭಕ್ತರ ಜೊತೆಗೆ ಬಹಿರಂಗವಾಗಿ ಚರ್ಚೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ಸಂಸದರು, ‘ಹಿಂದುಳಿದ ಸಮುದಾಯಗಳಿಗೆ ಸೇರಿದವರೇ ಹೆಚ್ಚಾಗಿ ಚಿಕ್ಕಲ್ಲೂರು ಕ್ಷೇತ್ರಕ್ಕೆ ಬರುವುದರಿಂದ ಭಕ್ತರ ಹಿತದೃಷ್ಟಿಯಿಂದ ಚಿಕ್ಕಲ್ಲೂರು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಪ್ರಾಧಿಕಾರ ರಚನೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ಆಹಾರ ಪದ್ಧತಿ ಅವರವರ ಹಕ್ಕು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಬಲಿಪೀಠವಿಲ್ಲ, ಹಾಗಾಗಿ ಪ್ರಾಣಿ ಬಲಿ ಪ್ರಶ್ನೆ ಉದ್ಭವಿಸುವುದಿಲ್ಲ ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕ್ಷೇತ್ರಕ್ಕೆ ಸುಸಜ್ಜಿತ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತು ನೀಡಲಾಗುವುದು. ಮುಂದಿನ ದಿನಗಳಲ್ಲಿ ವಿಶೇಷ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು’ ಎಂದು ಸಂಸದ ಸುನೀಲ್ ಬೋಸ್ ತಿಳಿಸಿದರು.
ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮ, ತೆಳ್ಳನೂರು ಅಂಬೇಡ್ಕರ್ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷ ಎಚ್.ಸೋಮಣ್ಣ, ಮುಖಂಡರಾದ ಮಂಗಲ ಪುಟ್ಟರಾಜು, ರಮೇಶ್, ಜಗದೀಶ್, ಸುರೇಶ್, ಪ್ರಭುಸ್ವಾಮಿ, ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿಯ ಮುಳ್ಳೂರು ಶಂಭುಲಿಂಗ ಸ್ವಾಮಿ, ಶಂಕನಪುರ ಮಹದೇವ, ಚೇತನ್ ದೊರೆರಾಜು, ಹನೂರು ಬ್ಲಾಕ್ ಯುವ ಕಾಂಗ್ರೆಸ್ ಮುಖಂಡ ಮಾದೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.