ADVERTISEMENT

ಗಡಿ ದಾಟಿದ 595 ತಮಿಳುನಾಡಿನ ಮೀನುಗಾರರು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 14:43 IST
Last Updated 28 ಮಾರ್ಚ್ 2020, 14:43 IST
ಪುಣಜನೂರು ಗಡಿ ಭಾಗದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಹಾಗೂ ಇತರೆ ಪೊಲೀಸ್‌ ಅಧಿಕಾರಿಗಳು ತಮಿಳುನಾಡಿನ ಮೀನುಗಾರರ ವಿಚಾರಣೆ ನಡೆಸಿದರು
ಪುಣಜನೂರು ಗಡಿ ಭಾಗದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಹಾಗೂ ಇತರೆ ಪೊಲೀಸ್‌ ಅಧಿಕಾರಿಗಳು ತಮಿಳುನಾಡಿನ ಮೀನುಗಾರರ ವಿಚಾರಣೆ ನಡೆಸಿದರು   

ಚಾಮರಾಜನಗರ: ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡಿನ 595 ಮೀನುಗಾರರು ಶುಕ್ರವಾರ ಸಂಜೆ ಜಿಲ್ಲೆಯ ಮೂಲಕ ತಮ್ಮ ರಾಜ್ಯಕ್ಕೆ ತೆರಳಿದ್ದಾರೆ.

ದಿಗ್ಬಂಧನದ ಕಾರಣಕ್ಕೆ ಮಂಗಳೂರಿನಿಂದ 20ಕ್ಕೂ ಹೆಚ್ಚು ಟೆಂಪೊ ಟ್ರಾವೆಲರ್‌ ಹಾಗೂ ಮಿನಿಬಸ್‌ಗಳಲ್ಲಿ ಬಂದಿದ್ದ ಮೀನುಗಾರರು ಪುಣಜನೂರು ಚೆಕ್‌ಪೋಸ್ಟ್‌ ದಾಟಿ ಹೋದರು. ತಮಿಳುನಾಡಿನ ಹಸನೂರು ಚೆಕ್‌ಪೋಸ್ಟ್‌ ಬಳಿ ಅವರನ್ನು ಇಳಿಸಿದ ವಾಹನಗಳು ಹಿಂದಿರುಗಿದವು. ತಮಿಳುನಾಡಿನ ಸಿಬ್ಬಂದಿ ಅವರನ್ನು ಅಲ್ಲಿ ತಡೆದರು. ಇದರಿಂದ ಗೊಂದಲ ಉಂಟಾಯಿತು. ನಂತರ ಜಿಲ್ಲೆಯ ಪೊಲೀಸರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿದರು.

‘ಮೀನುಗಾರರ ಬಳಿ ಸೂಕ್ತ ದಾಖಲೆಗಳು ಇರಲಿಲ್ಲ. ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಹೇಳಿಕೆ ಮಾತ್ರ ಇತ್ತು. ನಂತರ ತಮಿಳುನಾಡಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಯಿತು. ಮೀನುಗಾರರಿಂದ ಅಗತ್ಯ ದಾಖಲೆಗಳನ್ನು ಪಡೆದ ಬಳಿಕ ಅವರನ್ನು ಕಳುಹಿಸಿಕೊಡಲಾಯಿತು. ತಮಿಳುನಾಡಿನ ಚೆಕ್‌ಪೋಸ್ಟ್‌ನಲ್ಲಿ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಯಿತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಮಿಳುನಾಡು ಸರ್ಕಾರವೇ ಅವರನ್ನು ಕರೆದುಕೊಂಡು ಹೋಗಲು ವಾಹನದ ವ್ಯವಸ್ಥೆಯೂ ಮಾಡಿತ್ತು ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.