ಯಳಂದೂರು: ತನ್ನ ಮದುವೆ ಖರ್ಚಿಗಾಗಿ ಬ್ಯಾಂಕ್ನಿಂದ ಹಣ ಪಡೆದು ಹೊರಬಂದ ಮದುಮಗನ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು, ₹1.39 ಲಕ್ಷವನ್ನು ಶುಕ್ರವಾರ ಎಗರಿಸಿದ್ದಾರೆ.
ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಪಿ.ಬಂಗಾರು ಹಣ ಕಳೆದುಕೊಂಡವರು. ಪಟ್ಟಣದ ಗಾಂಧಿ ವೃತ್ತದ ಬಳಿ ಇರುವ ಎಸ್ಬಿಐ ಶಾಖೆಯ ಎಟಿಎಂನಲ್ಲಿ ₹1.39 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ಹೊರ ಬಂದಿದ್ದಾರೆ. ಈ ವೇಳೆ, ಅವರ ಹತ್ತಿರ ಬಂದ ವ್ಯಕ್ತಿಯೊಬ್ಬ, ‘ನಿಮ್ಮ ಬೆನ್ನಿಗೆ ಗಲೀಜು ಬಿದ್ದಿದೆ ಎಂದು ಗಮನವನ್ನು ಬೇರೆಡೆ ಸೆಳೆದಿದ್ದಾನೆ. ಬಂಗಾರು ಅವರು ಹಣದ ಬ್ಯಾಗನ್ನು ಬೈಕ್ನ ಟ್ಯಾಂಕ್ ಮೇಲಿಟ್ಟು ಹಿಂದಕ್ಕೆ ತಿರುಗಿದ್ದಾರೆ. ಈ ವೇಳೆ, ಮುಂದೆ ನಿಂತಿದ್ದ ವ್ಯಕ್ತಿ ಹಣದ ಬ್ಯಾಗ್ನೊಂದಿಗೆ ಪರಾರಿಯಾಗಿದ್ದಾನೆ.
ಹಣ ಡ್ರಾ ಮಾಡುವವರ ಬಗ್ಗೆ ದುಷ್ಕರ್ಮಿಗಳು ಮಾಹಿತಿ ಸಂಗ್ರಹಿಸುತ್ತಾರೆ. ಗ್ರಾಹಕರು ಹಣ ಪಡೆದು ಹೊರ ಬರುತ್ತಿದ್ದಂತೆ ಅವರ ಬಟ್ಟೆಗೆ ಹಿಂದಿನಿಂದ ಸ್ಪ್ರೇ ಮಾಡುವ ಮೂಲಕ ಇಂತಹ ದುಷ್ಕೃತ್ಯ ಎಸಗುತ್ತಿದ್ದಾರೆ. ಬ್ಯಾಂಕ್ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಸಬ್ ಇನ್ಸ್ಪೆಕ್ಟರ್ ಡಿ.ಆರ್.ರವಿಕುಮಾರ್ ತಿಳಿಸಿದರು.
ಸಹಾಯದ ನೆಪ; ಹಣ ಡ್ರಾ ಮಾಡಿ ಪರಾರಿ
ಪಟ್ಟಣದ ಎಸ್ಬಿಐ ಶಾಖೆಯ ಎಟಿಎಂ ಯಂತ್ರದಿಂದ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರ ₹11 ಸಾವಿರವನ್ನು ದುಷ್ಕರ್ಮಿಯೊಬ್ಬ ಡ್ರಾ ಮಾಡಿ ಪರಾರಿಯಾಗಿದ್ದಾನೆ.
ತಾಲ್ಲೂಕಿನ ಕೊಮಾರನಪುರ ಗ್ರಾಮದ ಮಹದೇವ ಹಣ ಕಳೆದುಕೊಂಡವರು. ಮಹದೇವ ಅವರು ಎಟಿಎಂ ಯಂತ್ರದಲ್ಲಿ ಹಣ ಪಡೆಯಲು ವ್ಯಕ್ತಿಯೊಬ್ಬರ ಸಹಾಯ ಕೋರಿದ್ದಾರೆ. ಆತ ಪಿನ್ ನಂಬರ್ ಪಡೆದು ಹಣ ಪಡೆಯುವ ನಾಟಕ ಆಡಿದ್ದಾನೆ. ನಂತರ, ಈ ಎಟಿಎಂನಲ್ಲಿ ಹಣ ಖಾಲಿಯಾಗಿದೆ’ ಎಂದು ಹೇಳಿ, ಬೇರೊಂದು ಕಾರ್ಡ್ ನೀಡಿ ತೆರಳಿದ್ದಾನೆ.
ಆನಂತರ, ಮಹದೇವ ಅವರ ಖಾತೆಯಿಂದ ₹11 ಸಾವಿರ ಡ್ರಾ ಆಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.