ADVERTISEMENT

ದರೋಡೆ ಪ್ರಕರಣ: ಮೂವರ ಬಂಧನ

ತಿಂಗಳ ಬಳಿಕ ಪ್ರಕರಣ ಬೇಧಿಸಿದ ಪೊಲೀಸರು, ತಲೆಮರೆಸಿಕೊಂಡಿರುವ ಮೂವರು ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 16:23 IST
Last Updated 19 ಸೆಪ್ಟೆಂಬರ್ 2022, 16:23 IST
ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿರುವ ವಸ್ತುಗಳೊಂದಿಗೆ ಡಿವೈಎಸ್‌ಪಿ ಪ್ರಿಯದರ್ಶಿನಿ, ಇನ್‌ಸ್ಪೆಕ್ಟರ್‌ ಆನಂದ್‌ ಹಾಗೂ ತಂಡ
ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿರುವ ವಸ್ತುಗಳೊಂದಿಗೆ ಡಿವೈಎಸ್‌ಪಿ ಪ್ರಿಯದರ್ಶಿನಿ, ಇನ್‌ಸ್ಪೆಕ್ಟರ್‌ ಆನಂದ್‌ ಹಾಗೂ ತಂಡ   

ಚಾಮರಾಜನಗರ: ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಆಗಸ್ಟ್‌ 20ರಂದು ದರೋಡೆಕೋರರ ತಂಡವೊಂದು ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ವಿವಿಧ ವಸ್ತುಗಳನ್ನು ದರೋಡೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಪೂರ್ವ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರಿನವರಾದ ನದೀಂ ಖಾನ್ ಅಲಿಯಾಸ್‌ ನದೀಂ, ಸೈಯದ್ ತನ್ನಿರ್ ಅಲಿಯಾಸ್‌ ತನು ಮತ್ತು ಸೈಯಾದ್ ಶಹಬಾಜ್ ಅಲಿಯಾಸ್‌ ಶಹಬಾಜ್ ಬಂಧಿತರು.

ADVERTISEMENT

ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿರುವ ಆರ್‌ಎಂಸಿ ಮಿಕ್ಸರ್‌ ಘಟಕಕ್ಕೆ ಆಗಸ್ಟ್‌ 20ರಂದು ಮಧ್ಯರಾತ್ರಿ ವೇಳೆ ನೀರು ಕೇಳುವ ನೆಪದಲ್ಲಿ ಆರು ಮಂದಿ ಭೇಟಿ ನೀಡಿದ್ದರು. ಅಲ್ಲಿನ ಭದ್ರತಾ ಸಿಬ್ಬಂದಿ ಬಾಬು ರಾಜೇಂದ್ರ ಪ್ರಸಾದ್‌ ಅವರಿಗೆ ಚಾಕು ತೋರಿಸಿ ಬೆದರಿಸಿದ್ದ ದರೋಡೆಕೋರರು, ಘಟಕದಲ್ಲಿದ್ದ ಪ್ಲಾಂಟ್‌ನಲ್ಲಿದ್ದ ₹1.64 ಲಕ್ಷ ಬೆಲೆ ಬಾಳುವ ನಾಲ್ಕು ಹಳೆಯ ವೈಬ್ರೆಟಿಂಗ್ ಮೋಟಾರುಗಳು ಹಾಗೂ ಕಬ್ಬಿಣದ ವಸ್ತುಗಳನ್ನು ಗೂಡ್ಸ್‌ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗಿದ್ದರು.

ಈ ಸಂಬಂಧ, ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ತಿಂಗಳ ಬಳಿಕ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವರ ಬಳಿಯಿಂದ ₹29 ಸಾವಿರ ಬೆಕೆಬಾಳುವ ಮೋಟಾರ್ ಹಾಗೂ ಕಬ್ಬಿಣದ ಪದಾರ್ಥಗಳು ಮತ್ತು ₹34 ಸಾವಿರ ನಗದು ಹಣ, ಕೃತ್ಯಕ್ಕೆ ಬಳಸಿದ ಚಾಕು, ಟಾರ್ಚ್, ಮೊಬೈಲ್ ಫೋನ್, ಕಾರು ಹಾಗೂ ಗೂಡ್ಸ್ ವಾಹನವನ್ನು ಜಪ್ತಿ ಮಾಡಿದ್ದಾರೆ.

ಡಿವೈಎಸ್‌ಪಿ ಪ್ರಿಯದರ್ಶಿನಿ ಈ ಸಾಣಿಕೊಪ್ಪ ತನಿಖೆ ನೇತೃತ್ವ ವಹಿಸಿದ್ದರು. ಠಾಣೆಯ ಇನ್ಸ್‌ಪೆಕ್ಟರ್ ಎಸ್‌. ಆನಂದ್‌, ಪಿಎಸ್‌ಐ ಸಿ.ಕೆ ಮಹೇಶ್‌ ಹಾಗೂ ಸಿಬ್ಬಂದಿ ಪುಟ್ಟರಾಜು, ಬಸವಣ್ಣ, ಚಂದ್ರಶೇಖರ, ನಂದಕುಮಾರ, ಬಾಷಾ ಸಾಬ್ ಮುಲ್ಲಾ, ಅಶೋಕ ಮತ್ತು ಜಿಲ್ಲಾ ತಾಂತ್ರಿಕ ಘಟಕದ ಸಿಬ್ಬಂದಿ ವೆಂಕಟೇಶ ಮತ್ತು ಶಂಕರರಾಜು ಅವರು ತನಿಖೆಯ ಭಾಗವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.