ಚಾಮರಾಜನಗರ: ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದ ಜೆಎಸ್ಎಸ್ ಕಲಾಮಂಟಪದ ಆಶ್ರಯದಲ್ಲಿ ನಗರದ ಜೆಎಸ್ಎಸ್ ಬಾಲಿಕಾ ಪ್ರೌಢಶಾಲೆಯ ಆವರಣದಲ್ಲಿ ಗುರುವಾರದಿಂದ (ಡಿ.1) ಮೂರು ದಿನಗಳ ‘ರಂಗೋತ್ಸವ–2022’ ನಡೆಯಲಿದೆ.
ಗುರುವಾರ ಬೆಳಿಗ್ಗೆ 11 ಗಂಟೆಗೆ ರಂಗೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಜೆಎಸ್ಎಸ್ ಮಹಾ ವಿದ್ಯಾಪೀಠದ ಪ್ರಕಟಣೆ ವಿಭಾಗದ ನಿರ್ದೇಶಕ ಪ್ರೊ, ಮೊರಬದ ಮಲ್ಲಿಕಾರ್ಜುನ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ನಗರದ ಶಾಂತಲಾ ಕಲಾವಿದರು ಟ್ರಸ್ಟ್ ಅಧ್ಯಕ್ಷ ಅಬ್ರಹಾಂ ಡಿ‘ಸಿಲ್ವ ಸಮಾರಂಭ ಉದ್ಘಾಟಿಸಲಿದ್ದಾರೆ. ನಟ ಲೋಕೇಶ್ ಬಸವಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಿ.3ರ ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅಧ್ಯಕ್ಷತೆ ವಹಿಸಲಿದ್ದು, ನಾಟಕಕಾರ ಎಚ್.ಜನಾರ್ದನ (ಜನ್ನಿ) ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರು ಉಪಸ್ಥಿತರಿರಲಿದ್ದಾರೆ.
ನಾಟಕ ಪ್ರದರ್ಶನ: ರಂಗೋತ್ಸವದ ಅಂಗವಾಗಿ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮೂರು ನಾಟಕಗಳನ್ನು ಪ್ರದರ್ಶಿಸಲಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಪ್ರದರ್ಶನಗಳು ಇರಲಿವೆ.
ಪ್ರದರ್ಶನಗೊಳ್ಳಲಿರುವ ನಾಟಕಗಳು:
ಗುರುವಾರ (ಡಿ.1) (ಮಧ್ಯಾಹ್ನ 12 ಮತ್ತು ಸಂಜೆ 6.30 ):ಹಲಗಲಿಯ ಬೇಡರು.ರಚನೆ– ಕ್ಯಾತನಹಳ್ಳಿ ರಾಮಣ್ಣ, ನಿರ್ದೇಶನ–ಮಂಜುನಾಥ ಕಾಚಕ್ಕಿ, ಸಹ ನಿರ್ದೇಶನ–ಪ್ರಶಾಂತ ಹೆಗ್ಗೋಡು, ಅಭಿನಯ– ಗುಂಡ್ಲುಪೇಟೆ ತಾಲ್ಲೂಕಿನ ಬರಗಿಯ ಜೆಎಸ್ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು.
ಶುಕ್ರವಾರ (ಡಿ.2) (ಬೆ.11.30 ಮತ್ತು ಸಂಜೆ 6.30): ಒಗಟಿನ ರಾಣಿ. ರಚನೆ-ಕೆ.ರಾಮಯ್ಯ,ನಿರ್ದೇಶನ- ಶಕುಂತಲಾ ಹೆಗಡೆ, ಅಭಿನಯ: ಮೈಸೂರು ಸಿದ್ಧಾರ್ಥ ಬಡಾವಣೆಯ ಜೆಎಸ್ಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು.
ಶನಿವಾರ (ಡಿ.3) (ಬೆ.11 ಮತ್ತು ಸಂಜೆ 6.30):ಚಾಮಚೆಲುವೆ. ರಚನೆ- ಸುಜಾತಾ ಅಕ್ಕಿ,ನಿರ್ದೇಶನ - ಜೀವನಕುಮಾರ್ ಹೆಗ್ಗೋಡು,ಸಹ ನಿರ್ದೇಶನ- ಸಮತಾ, ಮೈಸೂರು ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು.
ಮೂರೂ ನಾಟಕಗಳಿಗೂ ಚಂದ್ರಶೇಖರಾಚಾರ್ ಹೆಗ್ಗೋಠಾರ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.