ADVERTISEMENT

ಶಿವನಸಮುದ್ರ: ವೆಸ್ಲಿ ಸೇತುವೆ ಬಳಿ ಈಜಲು ಹೋದ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 13:06 IST
Last Updated 9 ಜೂನ್ 2019, 13:06 IST
ವೀಣಾ
ವೀಣಾ   

ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಶಿವನಸಮುದ್ರದ ಸಮೀಪವಿರುವ ಐತಿಹಾಸಿಕ ವೆಸ್ಲಿ ಸೇತುವೆಯ ಬಳಿ ಭಾನುವಾರ ಈಜಲು ಹೋಗಿದ್ದ ಮೂವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಸುಂಕದಕಟ್ಟೆಯ ಮನೋಜ್‍ಕುಮಾರ್ (23), ರಾಮನಗರ ಜಿಲ್ಲೆ ಮಾಗಡಿ ಸಮೀಪದ ಕೊತ್ತೇಗಾಲ ಗ್ರಾಮದ ಲೋಕೇಶ್ (21), ಕುಣಿಗಲ್ ತಾಲ್ಲೂಕಿನ ಲೆಪ್ಪನಾಯಕನ ಹಳ್ಳಿ ಗ್ರಾಮದ ವೀಣಾ (23) ಮೃತಪಟ್ಟವರು.

ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆಯ ಸ್ನೇಹಿತರೊಬ್ಬರ ಮದುವೆಗಾಗಿ ರಾಘವೇಂದ್ರ, ಸಿಂಧು, ಮೀನಾ, ಮನೋಜ್‍ಕುಮಾರ್, ಲೋಕೇಶ್ ಮತ್ತು ವೀಣಾ ಎಂಬುವವರು ಬೆಂಗಳೂರಿನಿಂದ ಬಂದಿದ್ದರು. ಮದುವೆ ಮುಗಿಸಿಕೊಂಡು ತಾಲ್ಲೂಕಿನ ಶಿವನಸಮುದ್ರದ ಗಗನಚುಕ್ಕಿ ಮತ್ತು ಭರಚುಕ್ಕಿ ವೀಕ್ಷಣೆಗಾಗಿ ಹೊರಟಿದ್ದರು.

ADVERTISEMENT

‘ದಾರಿ ಮಧ್ಯೆ ಸಿಗುವ ವೆಸ್ಲಿ ಸೇತುವೆಯನ್ನು ನೋಡಿದ ಬಳಿಕ ಆರು ಮಂದಿಯೂ ಈಜುವುದಕ್ಕಾಗಿ ನೀರಿಗೆ ಇಳಿದರು. ಈ ಸಂದರ್ಭದಲ್ಲಿ ವೀಣಾ ಅವರು ನೀರಿನ ಸೆಳತಕ್ಕೆ ಸಿಕ್ಕರು. ಅವರನ್ನು ರಕ್ಷಿಸಲು ಲೋಕೇಶ್‌ ಮತ್ತು ಮನೋಜ್‌ಕುಮಾರ್‌ ಅವರು ಮುಂದಾದರು. ಆದರೆ, ನೀರಿನ ರಭಸಕ್ಕೆ ಸಿಲುಕಿ ಮೂವರೂ ಮೃತಪ‍ಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನುರಿತ ಈಜುಗಾರರ ಸಹಾಯದಿಂದ ಮೂವರ ಶವವನ್ನೂ ಹೊರತೆಗೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.