ಗುಂಡ್ಲುಪೇಟೆ: ಕಾಡಂಚಿನ ಗ್ರಾಮಗಳಲ್ಲಿ ಹಸುಗಳ ಮೇಲೆ ನಿರಂತರ ದಾಳಿ ಮಾಡುತ್ತಿರುವ ಹುಲಿ ಪತ್ತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುಂದುಕೆರೆ ವಲಯದಲ್ಲಿ ಕೂಂಬಿಂಗ್ ನಡೆಸಿದರು.
ಚಿರಕನಹಳ್ಳಿ, ಕುಂದುಕೆರೆ, ಮಾಲಾಪುರ, ಉಪಕಾರ ಕಾಲೊನಿಯ ಕಾಡಂಚಿನ ಭಾಗದಲ್ಲಿ ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಮಾಡಲಾಯಿತು.
ಕಳೆದ ಒಂದು ತಿಂಗಳಲ್ಲಿ ಆರೇಳು ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿತ್ತು. ಹುಲಿ ಸೆರೆಹಿಡಿಯುವಂತೆ ರೈತರು ಆಗ್ರಹಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಲ್ಲಿ ಬೋನು ಇಟ್ಟು, ಕ್ಯಾಮೆರಾಗಳನ್ನು ಅಳವಡಿಸಿ ಹುಲಿ ಸೆರೆಗೆ ಕ್ರಮ ವಹಿಸಿದ್ದರು. ಆದರೂ ಹುಲಿ ಪತ್ತೆಯಾಗಿರಲಿಲ್ಲ. ಹೀಗಾಗಿ, ಕೂಂಬಿಂಗ್ ನಡೆಸಲಾಗುತ್ತಿದೆ.
ಹುಲಿ ಒಂದೇ ಇರುವುದಿಲ್ಲ. ಅದರ ಸರಹದ್ದು ಹೆಚ್ಚಿರುತ್ತದೆ. ಆದ್ದರಿಂದ ಹುಲಿ ಕಂಡರೆ ಕಾಡಿನೊಳಗೆ ಓಡಿಸಲು ಕೂಂಬಿಂಗ್ ಮಾಡಲಾಗುತ್ತದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.