ADVERTISEMENT

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಜಯಂತಿ

ರಾಜ್ಯ ಸರ್ಕಾರ ಆಚರಣೆ ರದ್ದು ಮಾಡಿ ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ತಂದಿದೆ–ಪುಟ್ಟರಂಗಶೆಟ್ಟಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 16:10 IST
Last Updated 10 ನವೆಂಬರ್ 2020, 16:10 IST
ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು
ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು   

ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಮಂಗಳವಾರ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಆಚರಿಸಲಾಯಿತು.

ಟಿಪ್ಪು ಸುಲ್ತಾನ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ಟಿಪ್ಪು ಸುಲ್ತಾನ್ ಉತ್ತಮ ಆಡಳಿತ ನೀಡಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಅವರ ಆಡಳಿತವನ್ನು ಜಗತ್ತೇ ಮೆಚ್ಚಿತ್ತು. ತನ್ನ ರಾಜ್ಯದ ಜನರ ಸುಭಿಕ್ಷೆಗಾಗಿ ದುಡಿದ ಮಹಾನ್ ಆಡಳಿತಗಾರ. ರೇಷ್ಮೆ ಕೃಷಿಗೆ ಉತ್ತೇಜನ ನೀಡಿದ್ದರು. ಬ್ರಿಟಿಷರ ಕಾಯ್ದೆಗಳ ವಿರುದ್ದ ಧ್ವನಿ ಎತ್ತಿ, ಪದೇ ಪದೇ ಅವರ ಮೇಲೆ ಯುದ್ದ ಮಾಡಿ ಜಯಗಳಿಸುತ್ತಿದ್ದರು. ಬ್ರಿಟಿಷರಿಗೆ ಅವರ ಬಗ್ಗೆ ಭಯ ಇತ್ತು.ಇಂಥ ಮಹಾನ್ ಹೋರಾಟಗಾರ ಜಯಂತಿಯನ್ನು ಅಚರಣೆ ಮಾಡುವುದು ನಮ್ಮೆಲ್ಲರ ಪುಣ್ಯ’ ಎಂದರು.

‘ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿಯನ್ನು ಆಚರಣೆ ಮಾಡಲು ಆದೇಶ ಮಾಡಿ, ಐದು ವರ್ಷಗಳ ಕಾಲ ಜಯಂತಿ ನಡೆಯುವಂತೆ ಮಾಡಿದ್ದರು. ಈಗಿನ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಪಡಿಸುವ ಮೂಲಕ ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ಉಂಟು ಮಾಡಿದೆ’ ಎಂದು ದೂರಿದರು.

ADVERTISEMENT

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ‘ಟಿಪ್ಪು ಸುಲ್ತಾನ್, ಶತ್ರುಗಳಿಗೆ ಸಿಂಹಸ್ವಪ್ನವಾಗಿದ್ದರು. ಯುದ್ಧವನ್ನು ಸಾರಿ ಜಯಿಸುವ ಜೊತೆಗೆ ಉತ್ತಮ ಆಡಳಿತಗಾರರು ಸಹ ಆಗಿದ್ದರು. ಅವರ ಅವಧಿಯಲ್ಲಿ ಜಾರಿಯಾದ ಅನೇಕ ಯೋಜನೆಗಳೇ ಇದಕ್ಕೆ ಸಾಕ್ಷಿ’ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮದ್ ಆಸ್ಗರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆರೆಹಳ್ಳಿ ನವೀನ್, ರಮೇಶ್,ತಾಲ್ಲೂಕು ಪಂಚಾಯಿತಿ ಸದಸ್ಯ ಮಹದೇವಶೆಟ್ಟಿ, ಮುಖಂಡರಾದ ಸೈಯದ್ ರಫಿ, ಸುಹೇಲ್ ಅಲಿ ಖಾನ್, ಶಿವಮೂರ್ತಿ, ಸಿ.ಕೆ.ರವಿಕುಮಾರ್, ನಾಗಾರ್ಜುನ್ ಪ್ರಥ್ವಿ, ಎಂ.ಸ್ವಾಮಿ, ಕೆ.ಟಿ. ನಾಗಶೆಟ್ಟಿ, ಕೃಷ್ಣಪ್ಪ, ಮುತ್ತಿಗೆದೊರೆ, ಅಯುಬ್‌ಖಾನ್, ಇಮ್ರಾನ್, ಅಫ್ಜಲ್ ಷರೀಪ್, ಅಬ್ಬಾಸ್, ಫರೇಜ್, ಜಬೀವುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.