ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು 750 ಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ್ದು ಗಮನ ಸೆಳೆಯಿತು.
ಭಾರತ ಮಾತೆಯ ಭಾವಚಿತ್ರವನ್ನು ಅಳವಡಿಸಲಾಗಿದ್ದ, ಅಲಂಕೃತ ತೆರೆದ ಜೀಪು ಮುಂಭಾಗದಲ್ಲಿ ಸಾಗಿದರೆ, ಅದರ ಹಿಂದೆ ಬೃಹತ್ ತಿರಂಗ ಹಿಡಿದ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ. ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ತಿರಂಗಾ ಯಾತ್ರೆಗೆ ಚಾಲನೆ ದೊರಕಿತು.ಬಿ.ರಾಚಯ್ಯ ಜೋಡಿರಸ್ತೆ, ಭುವನೇಶ್ವರಿ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡೀವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತದ ಮೂಲಕ ಚಾಮರಾಜೇಶ್ವರ ದೇವಾಲಯಕ್ಕೆ ತೆರಳಿ ಮುಕ್ತಾಯವಾಯಿತು.
ಯಾತ್ರೆ ಸಮಯದಲ್ಲಿ ‘ಬೋಲೋ ಭಾರತ್ ಮಾತಾಕಿ ಜೈ’, ‘ವಂದೇ ಮಾತರಂ’ ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗಿದರು.
ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಪ್ರದೀಪ್ ಕುಮಾರ್ ದೀಕ್ಷಿತ್, ಎಬಿವಿಪಿಯ ರಾಜ್ಯ ಕಾರ್ಯ ಸಮಿತಿಯ ಶ್ರುತನ್, ರಾಜ್ಯ ಕಾರ್ಯಕಾರಿ ಸಮಿತಿಯ ವಿಪುಲ್ ಮತ್ತು ಸೃಷ್ಟಿ, ಜಿಲ್ಲಾ ಸಂಚಾಲಕ ಗಗನ್ ಜಿ.ಟಿ, ಪದಾಧಿಕಾರಿಗಳಾದ ಜೇತು ಪಟೇಲ್, ಚಂದನ್, ಜೀವನ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.