ADVERTISEMENT

ವಿಶೇಷ ಮಕ್ಕಳಿಗೆ ಜೀವನ ಕೌಶಲದ ಸ್ಪರ್ಶ

ಬುದ್ಧಿಮಾಂದ್ಯತೆ, ಡೌನ್‌ ಸಿಂಡ್ರೋಮ್‌, ಕಲಿಕಾ ನ್ಯೂನತೆ, ಆಟಿಸಂ ಮಕ್ಕಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 15:05 IST
Last Updated 22 ಜೂನ್ 2018, 15:05 IST
ಕೃತಕ ಫೈಬರ್‌ ಕಾಲನ್ನು ತೊಟ್ಟು ಶಿಕ್ಷಕರೊಡನೆ ನಿಂತ ಮಕ್ಕಳು
ಕೃತಕ ಫೈಬರ್‌ ಕಾಲನ್ನು ತೊಟ್ಟು ಶಿಕ್ಷಕರೊಡನೆ ನಿಂತ ಮಕ್ಕಳು   

ಯಳಂದೂರು: ಅದು ವಿಶೇಷ ಮಕ್ಕಳು ಮತ್ತು ಪೋಷಕರಲ್ಲಿ ಸಂತಸದ ಕ್ಷಣ. ಶಿಕ್ಷಣ ಇಲಾಖೆಯ ಮೂಲಕ ನೀಡಲಾದ ಸಲಕರಣೆಗಳನ್ನು ಸ್ಪರ್ಶಿಸಿದಾಗ ಆ ಚಿಣ್ಣರ ಮೊಗದಲ್ಲಿ ಸಂಭ್ರಮದ ನಗೆ ಉಕ್ಕಿತು.

ಈ ದೃಶ್ಯ ಕಂಡು ಬಂದಿದ್ದು ಪಟ್ಟಣದ ಸರ್ಕಾರಿ ಶಾಲಾ ಆವರಣದಲ್ಲಿರುವ ‘ಬ್ಲಾಕ್‌ ಇನ್‌ಕ್ಲುಸಿವ್‌ ಎಜುಕೇಷನಲ್‌ ರಿಸೋರ್ಸ್‌ ಟೀಚರ್‌’ (ಬಿಐಇಆರ್‌ಟಿ) ಕೇಂದ್ರದಲ್ಲಿ.ಬುದ್ಧಿಮಾಂದ್ಯತೆ ಮತ್ತು ಇತರ ದೈಹಿಕ ನ್ಯೂನತೆಯಿಂದ ಬಳಲುತ್ತಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಯತ್ನಿಸುತ್ತಿರುವ ಶಾಲಾ ಸಿದ್ಧತಾ ಕೇಂದ್ರವೂ ಆ ಚಿಣ್ಣರ ಸಂತಸದಲ್ಲಿ ಭಾಗಿಯಾಗಿತ್ತು.

ಬಿಐಇಆರ್‌ಟಿ ಕೇಂದ್ರವು ಬುದ್ಧಿಮಾಂದ್ಯತೆ, ಲಘು ಬುದ್ಧಿಮಾಂದ್ಯತೆ, ಡೌನ್‌ ಸಿಂಡ್ರೋಮ್‌, ಕಲಿಕಾನ್ಯೂನತೆ, ಆಟಿಸಂ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವಮಕ್ಕಳಿಗೆ ಸಮರ್ಪಕ ಶಿಕ್ಷಣ, ತರಬೇತಿ,ಚಿಕಿತ್ಸೆ ನೀಡುವ ಮೂಲಕ ಅವರನ್ನು ಸ್ವಾವಲಂಬಿಯಾಗಿಸುವ ಗುರಿಯನ್ನು ಇಟ್ಟುಕೊಂಡು10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

ADVERTISEMENT

ಆರಂಭದಲ್ಲಿ 7 ಗೃಹ ಆಧರಿತ ಮಕ್ಕಳು ಮತ್ತು ಒಬ್ಬ ಶಿಕ್ಷಕರ ಮೇಲ್ವಿಚಾರಣೆಯಲ್ಲಿಆರಂಭಗೊಂಡಿದ್ದ ತರಗತಿ ಈಗ 34ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಈ ಕೇಂದ್ರದಲ್ಲಿ ಸಹಾಯಕ ಸಿಬ್ಬಂದಿ ನೆರವಿನಿಂದ ಮಕ್ಕಳ ಅಗತ್ಯಕ್ಕೆತಕ್ಕಂತೆ ಥೆರಪಿ ಮತ್ತು ಆಪ್ತ ಸಮಾಲೋಚನೆ ನಡೆಯುತ್ತದೆ.ಉಳಿದಂತೆ ಆ ಮಕ್ಕಳಿಗೆ ಅವರ ಗ್ರಾಮಗಳ ಶಾಲೆಯಲ್ಲಿ ಕಲಿಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಜೀವನ ಕೌಶಲಕ್ಕೆ ಒತ್ತು: ಶಾಲೆಗಳಲ್ಲಿ ಈ ಮಕ್ಕಳಿಗೆಕಲಿಸುವಾಗ ವಿಶೇಷ ಬೋಧನೋಪಕರಣ, ವಿಶೇಷ ಶಿಕ್ಷಣ ಕಿಟ್, ಮಿಂಚುಪಟ್ಟಿ, ಚಟುವಟಿಕಾ ಪಟ್ಟಿಗಳನ್ನು ಬಳಸಲಾಗುತ್ತದೆ. ಸ್ಪರ್ಶಾನುಭವ ಮತ್ತುಪ್ರತ್ಯಕ್ಷಾನುಭವಕ್ಕೆ ಆದ್ಯತೆ ನೀಡಲಾಗುತ್ತದೆ.

‘ವೈಯಕ್ತಿಕ ಸ್ವಚ್ಛತೆ, ಶೌಚಕ್ರಿಯೆ,ಹಲ್ಲು ಉಜ್ಜುವುದು, ಬಟ್ಟೆ ಧರಿಸುವುದು, ಪಾದರಕ್ಷೆ ಹಾಕಿಕೊಳ್ಳುವ ಕೌಶಲಗಳನ್ನು ಕಲಿಸಲಾಗುತ್ತದೆ. ಬಹು ಅಂಗವೈಕಲ್ಯ ಇರುವವರಿಗೆ ಮನೆ ಬಳಿ ತೆರಳಿ ಜೀವನ ಕೌಶಲದ ಬಗ್ಗೆ ತಿಳಿಸುತ್ತೇವೆ’ ಎಂದು ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿ ಭಾಗ್ಯ ತಿಳಿಸಿದರು.

‘ಪೋಷಕರ ಜತೆ ಸಂವಹನ ನಡೆಸಿ ಮಕ್ಕಳ ಕಲಿಕೆ, ವಿಕಾಸ, ಸಮಸ್ಯೆ, ನ್ಯೂನತೆಗಳ ಕುರಿತುಮಾಹಿತಿ ನೀಡಲಾಗುತ್ತದೆ. ಚಟುವಟಿಕೆಗಳಲ್ಲಿ ತಾಯಂದಿರನ್ನೂ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಿದೆ’ ಎಂದು ಪೋಷಕರಾದ ಕೊಮಾನಪುರ ಶಿವಮಲ್ಲಪ್ಪ ಹೇಳಿದರು.

ಮಕ್ಕಳ ಸಂಖ್ಯೆ ಹೆಚ್ಚಳ

‘ವಾರದಲ್ಲಿ ಎರಡು ಬಾರಿ ತಪಾಸಣೆಗೆ ಇಲ್ಲಿಗೆ ಬರುವಾಗ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಮಹಾದೇವ ಅವರು ಎಲ್ಲ ಮಕ್ಕಳಿಗೂ ಉಚಿತವಾಗಿ ಹಣ್ಣು, ಬ್ರೆಡ್‌ ನೀಡುತ್ತಾರೆ. ಇದು ವಿಶೇಷ ವಿದ್ಯಾರ್ಥಿಗಳ ಹಾಜರಾತಿಯ ಏರಿಕೆಗೂ ಕಾರಣವಾಗಿದೆ’ ಎನ್ನುತ್ತಾರೆ ಬಿಇಒ ವಿ. ತಿರುಮಲಾಚಾರಿ.

ಥೆರಪಿ ವೈವಿಧ್ಯ

ರೇಂಜ್‌ ಆಫ್‌ ಮೋಷನ್‌ ಥೆರಪಿ, ಸ್ಪೀಚ್‌ ಥೆರಪಿ, ಫಿಸಿಯೋಥೆರಫಿ, ಆರ್ಟ್ ಬೇಸ್ಡ್‌ಥೆರಪಿ, ಯೋಗಥೆರಪಿ, ಮ್ಯೂಸಿಕ್‌ ಥೆರಪಿ, ಆಪ್ತ ಸಮಾಲೋಚನೆಯಂತಹ ಚಿಕಿತ್ಸೆಗಳ ಸೌಲಭ್ಯ ಇಲ್ಲಿದೆ.

‘ದೈಹಿಕ ನ್ಯೂನತೆ ಇರುವ ಎಳೆಯರಿಗೆ ಕಾರ್ನರ್‌ ಚೇರ್‌, ಟ್ರೈಸಿಕಲ್, ಕೃತಕಕಾಲು, ಪಾದರಕ್ಷೆ, ಶ್ರವಣೋಪಕರಣಗಳನ್ನು ಉಚಿತವಾಗಿ (ಶಿಕ್ಷಣ ಇಲಾಖೆ ಮೂಲಕ) ಒದಗಿಸಲಾಗುತ್ತದೆ. ಗೃಹಬಂಧನಕ್ಕೆ ಒಳಗಾದಮಕ್ಕಳಿಗೂ ಇಲ್ಲಿ ಕಲಿಕೆಸಾಧ್ಯವಾಗಿದೆ’ ಎಂದು ಜಿಲ್ಲಾ ಡಿವೈಪಿಸಿ ಗುರುಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನಾ. ಮಂಜುನಾಥಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.