ADVERTISEMENT

ಬಂಡೀಪುರ: ಪ್ರವಾಸಿಗರ ಪೋಟೊ ತೆಗೆಯುವ ಹುಚ್ಚು, ಪ್ರಾಣಿಗಳಿಗೆ ಕಿರಿಕಿರಿ

ಹೆದ್ದಾರಿಯಲ್ಲಿ ವಾಹನ ನಿಲ್ಲಿಸುವ ಪ್ರವಾಸಿಗರು

ಮಲ್ಲೇಶ ಎಂ.
Published 4 ಜನವರಿ 2022, 19:30 IST
Last Updated 4 ಜನವರಿ 2022, 19:30 IST
ವಾಹನ ಸವಾರರೊಬ್ಬರು ಬಂಡೀಪುರ ಹೆದ್ದಾರಿ ಬದಿಯಲ್ಲಿ ಮೇಯುತ್ತಿದ್ದ ಆನೆಗಳ ಫೋಟೊವನ್ನು ತೆಗೆಯುತ್ತಿರುವುದು
ವಾಹನ ಸವಾರರೊಬ್ಬರು ಬಂಡೀಪುರ ಹೆದ್ದಾರಿ ಬದಿಯಲ್ಲಿ ಮೇಯುತ್ತಿದ್ದ ಆನೆಗಳ ಫೋಟೊವನ್ನು ತೆಗೆಯುತ್ತಿರುವುದು   

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವ ಪ್ರವಾಸಿಗರು ಹೆದ್ದಾರಿ ಬದಿಯಲ್ಲಿ ಸಿಗುವ ಕಾಡು ಪ್ರಾಣಿಗಳನ್ನು ಪೋಟೊ ತೆಗೆಯುವ ಭರದಲ್ಲಿ ಕೀಟಲೆ ಮಾಡುತ್ತಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಪ್ರತಿದಿನ ಸಾವಿರಾರು ವಾಹನಗಳು ಹೆದ್ದಾರಿಯಲ್ಲಿ ಸಂಚರಿಸುತ್ತಿವೆ.

ರಸ್ತೆಯ ಬದಿಯಲ್ಲಿ ಮೇಯುವ ಆನೆ, ಜಿಂಕೆ, ಕಡವೆ, ಕಾಡಮ್ಮೆಗಳು ಕಂಡರೆ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಪೋಟೊ ತೆಗೆಯುವುದು, ಜಿಂಕೆ ಮತ್ತು ಕಡವೆ, ಕೋತಿಗಳಿಗೆ ತಿಂಡಿ ನೀಡುವುದನ್ನು ಮಾಡುತ್ತಿರುವುದರಿಂದ ಉಳಿದ ಸವಾರರಿಗೆ ತೊಂದರೆಯಾಗುತ್ತಿದೆ.

ADVERTISEMENT

ಕಾಡಿನಲ್ಲಿ ಹಾದು ಹೋಗಿರುವ ರಸ್ತೆಯುದ್ದಕ್ಕೂ ಕಾಡಿನ ಮಧ್ಯೆ ವಾಹನಗಳನ್ನು ನಿಲ್ಲಿಸಬಾರದು, ಪ್ರಾಣಿಗಳಿಗೆ ತಿಂಡಿ ನೀಡಬಾರದು, ಪ್ರಾಣಿಗಳ ಪೋಟೊ ತೆಗೆಯಬಾರದು, ಪ್ಲಾಸ್ಟಿಕ್ ಬಳಸಬಾರದು ಎಂಬ ನಾಮ ಫಲಕಗಳು ಇದ್ದರೂ ಪ್ರಯೋಜನವಾಗುತ್ತಿಲ್ಲ. ಕೆಲವರು ಗೊತ್ತಿದ್ದೂ ಇಂತಹ ತಪ್ಪುಗಳನ್ನು ಮಾಡುತ್ತಿದ್ದಾರೆ.

’ಕಾರಿನಲ್ಲಿ ಸಂಚಾರ ಮಾಡುವ ಪ್ರವಾಸಿಗರು ಆನೆಗಳನ್ನು ಕಂಡು ಹತ್ತಿರಕ್ಕೆ ಪೋಟೊ ತೆಗೆದರೆ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಆನೆಯ ಮರಿಗಳು ಇದ್ದರೆ ಮರಿಗಳ ರಕ್ಷಣೆಗೆ ಆನೆಗಳ ವಾಹನಗಳ ಮೇಲೆ ದಾಳಿ ಮಾಡಲು ಮುಂದಾಗುತ್ತವೆ. ಆದ್ದರಿಂದ ಹೆದ್ದಾರಿಯಲ್ಲಿ ಸಂಚಾರ ಮಾಡುವವರು ಪ್ರಾಣಿಗಳನ್ನು ಕಂಡರೆ ನಿಲ್ಲಿಸಬಾರದು ಎಂದು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಪ್ರವಾಸಿಗರಿಗೆ ದಂಡ ವಿಧಿಸಲಾಗುತ್ತಿದೆ. ಆದರೂ ಇಂತಹ ಘಟನೆಗಳು ನಡೆಯುತ್ತಿವೆ‘ ಎಂದು ವಲಯಾರಣ್ಯಧಿಕಾರಿ ಅವರು ನವೀನ್ ಕುಮಾರ್ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ಗಸ್ತು ಹೆಚ್ಚಿಸಲು ಒತ್ತಾಯ

’ಪ್ರವಾಸಿಗರು ತಿಂಡಿಗಳನ್ನು ನೀಡಿ ಅಭ್ಯಾಸ ಮಾಡಿರುವುದರಿಂದ ಕೋತಿ, ಜಿಂಕೆಗಳು ಪ್ರವಾಸಿಗರ ವಾಹನಗಳ ಕಾಯುತ್ತಿರುತ್ತವೆ. ವಾಹನ ಒಳಗೆ ಇರುವ ಕವರ್‌ಗಳು ಕೋತಿಗಳು ಎತ್ತಿಕೊಂಡು ಹೋಗುತ್ತವೆ. ಪ್ರವಾಸಿಗರು ಸೇವಾ ಮನೋಭಾವದ ದೃಷ್ಟಿಯಿಂದ ಪ್ರಾಣಿಗಳಿಗೆ ತಿಂಡಿ ನೀಡುತ್ತಾರೆ. ಆದರೆ, ಪ್ರಾಣಿಗಳು ಈ ತಿಂಡಿಗಳಿಗೆ ಸೆಳೆತಗೊಂಡು ತಮ್ಮ ಸಹಜ ಕ್ರಿಯೆಗಳನ್ನು ಮರೆಯುತ್ತದೆ‘ ಎಂದು ವನ್ಯಜೀವಿ ಛಾಯಾಗ್ರಾಹಕ ರಮೇಶ್ ಅವರು ತಿಳಿಸಿದರು.

’ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಸವಾರರ ಮೇಲೆ ಗಮನ ಇಡಬೇಕು. ಸಿಬ್ಬಂದಿ ಗಸ್ತು ಹೆಚ್ಚಿಸಬೇಕು. ಈ ರೀತಿಯಲ್ಲಿ ಮಾಡುವುದರಿಂದ ಕಾಡಿನ ಸುರಕ್ಷತಾ ಜೊತೆಗೆ ನಿಯಮಗಳು ಉಲ್ಲಂಘನೆ ಆಗುವುದು ತಪ್ಪುತ್ತದೆ‘ ಎಂದು ಮಂಗಲ ಉಮೇಶ್ ಒತ್ತಾಯಿಸಿದರು.

--

ಹೆದ್ದಾರಿಯಲ್ಲಿ ಸಿಬ್ಬಂದಿ ಗಸ್ತು ತಿರುಗುತ್ತಾರೆ. ಅವರು ಇಲ್ಲದಿದ್ದಾಗ ಇಂತಹ ಘಟನೆಗಳು ನಡೆಯುತ್ತದೆ. ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ವಹಿಸಲಾಗುತ್ತಿದೆ

– ನವೀನ್ ಕುಮಾರ್, ಆರ್‌ಎಫ್ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.