ಚಾಮರಾಜನಗರ: ಶಿಥಿಲಗೊಂಡಿದ್ದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ನಗರದ ಪಟ್ಟಣ ಪೊಲೀಸ್ ಠಾಣೆಯನ್ನು ಕೊನೆಗೂ ಸ್ಥಳಾಂತರ ಮಾಡಲಾಗಿದೆ. ಪ್ರವಾಸಿ ಮಂದಿರದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯ ಹಳೆಯ ಕಟ್ಟಡದಲ್ಲಿ ಠಾಣೆ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲಿದೆ.
ನಗರದ ತರಕಾರಿ ಮಾರುಕಟ್ಟೆಯ ಬಳಿ ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಠಾಣೆಯಲ್ಲಿ ಚಾವಣಿ ಹಾಗೂ ಗೋಡೆ ಶಿಥಿಲಗೊಂಡಿತ್ತು. ಮಳೆ ಬರುವ ಸಂದರ್ಭದಲ್ಲಿ ನೀರು ಸೋರುತ್ತಿತ್ತು.ಸಿಬ್ಬಂದಿ ಛತ್ರಿ ಹಿಡಿದು ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಗೋಡೆ ಹಾಗೂ ಚಾವಣಿ ಯಾವಾಗ ಕುಸಿಯುವುದೋ ಎಂಬ ಭೀತಿಯಲ್ಲಿ ಕೆಲಸ ಮಾಡಬೇಕಾಗಿತ್ತು.
ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಠಾಣೆಯ ಒಳಗಡೆ ಎಲ್ಲ ನೀರು ಸಂಗ್ರಹಗೊಂಡಿತ್ತು. ಸಿಬ್ಬಂದಿ ಛತ್ರಿ ಹಿಡಿದು ಕೆಲಸ ಮಾಡುತ್ತಿರುವ ಚಿತ್ರ ‘ಪ್ರಜಾವಾಣಿ’ಯ ಶುಕ್ರವಾರದ ಸಂಚಿಕೆಯಲ್ಲೂ ಪ್ರಕಟವಾಗಿತ್ತು.
ಮತ್ತೆ ಮಳೆ ಮುಂದುವರಿದಿದ್ದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಅರಿತ ಪೊಲೀಸ್ ಇಲಾಖೆ, ಶುಕ್ರವಾರ ಬೇರೆ ಕಡೆಗೆ ಸ್ಥಳಾಂತರಗೊಂಡಿದೆ.
‘ತಾತ್ಕಾಲಿಕವಾಗಿ ಲೋಕೋಪಯೋಗಿ ಇಲಾಖೆಯ ಹಳೆಯ ಕಟ್ಟಡಕ್ಕೆ ಠಾಣೆಯನ್ನು ಸ್ಥಳಾಂತರಗೊಳಿಸಲಾಗುತ್ತಿದೆ. ಅರ್ಧದಷ್ಟು ಸಾಮಾನುಗಳನ್ನು ಸ್ಥಳಾಂತರಿಸಲಾಗಿದೆ. ಇದು ಹಳೆಯ ಕಟ್ಟಡವಾಗಿದ್ದರಿಂದ ಮಳೆಯ ಸಂದರ್ಭದಲ್ಲಿ ಭಾರಿ ಸಮಸ್ಯೆಯಾಗುತ್ತಿದೆ. ಇನ್ನು ಎರಡು ದಿನ ಹೀಗೆ ಮಳೆ ಬಂದರೆ, ಕೆಲಸ ಮಾಡುವುದಕ್ಕೇ ಕಷ್ಟವಾಗುತ್ತಿತ್ತು’ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎನ್.ಸಿ.ನಾಗೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.