ಚಾಮರಾಜನಗರ: ಅಶೋಕ ಪರಿಸರ ಸಂಶೋಧನೆ ಮತ್ತು ಪರಿಸರ ವಿಜ್ಞಾನದತ್ತಿ ಸಂಸ್ಥೆ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಮತ್ತು ತಾಲ್ಲೂಕು ಸೋಲಿಗ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಅರಣ್ಯಹಕ್ಕು ಕಾಯ್ದೆ 2006ರ ಅನುಷ್ಠಾನ ಕುರಿತು ಕಾರ್ಯಾಗಾರ ಜೀರಿಗೆಗದ್ದೆ ಗ್ರಾಮದ ಬುಡಕಟ್ಟು ಆಶ್ರಮಶಾಲೆಯಲ್ಲಿ ನಡೆಯಿತು.
ಏಟ್ರಿಸಂಸ್ಥೆ ಸಂಶೋಧಕ ಸಿ.ಮಾದೇಗೌಡ ಮಾತನಾಡಿ, ಆದಿವಾಸಿಗಳು ಹಕ್ಕುಗಳನ್ನು ಪಡೆದುಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗದೆ 18 ವರ್ಷಗಳಿಂದಲೂ ಆದಿವಾಸಿಗಳಿಗೆ ಹಕ್ಕುಗಳು ದೊರೆತಿಲ್ಲ. ಗ್ರಾಮಮಟ್ಟದಲ್ಲಿ ಗ್ರಾಮಸಭೆಗಳನ್ನು ಮಾಡಿ ಅರಣ್ಯಹಕ್ಕು ಸಮಿತಿಗಳನ್ನು ಬಲಪಡಿಸಿದರೆ ಆದಿವಾಸಿಗಳು ಸವಲತ್ತು ಪಡೆಯಲು ಅನುಕೂಲವಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್ ಮಾತನಾಡಿ, ಅರಣ್ಯಹಕ್ಕುಗಳನ್ನು ಪಡೆದುಕೊಳ್ಳುವ ಸಂಬಂಧ ಕೊಳ್ಳೇಗಾಲ, ಹನೂರು, ಚಾಮರಾಜನಗರ, ಯಳಂದೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ವೈಯಕ್ತಿಕ ಭೂಮಿ ಪಡೆಯಲು ವಿವಾದಿತ 3(1) ಒ, ಸಮುದಾಯ ಹಕ್ಕುಗಳಿಗೆ ಉಪವಿಭಾಗ ಮಟ್ಟದ ಸಮಿತಿಗೆ ಸಲ್ಲಿಕೆಯಾಗಿರುವ ಅರ್ಜಿಗಳು ಅಪೂರ್ಣವಾಗಿದ್ದು ಗ್ರಾಮ ಪಂಚಾಯಿತಿಗಳಿಗೆ ವಾಪಸ್ ಕಳುಹಿಸಲಾಗಿದೆ. ಅಗತ್ಯ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಿ ಹಕ್ಕುಪತ್ರಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಿ.ಜಿ.ಪಾಳ್ಯ ಗ್ರಾಮಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ಸಮುದಾಯ ಒಗ್ಗಟ್ಟಿನಿಂದ ಕೆಲಸಮಾಡಿ ಅರಣ್ಯಹಕ್ಕುಗಳನ್ನು ಪಡೆದುಕೊಳ್ಳೇಕು ಎಂದು ಸಲಹೆ ನೀಡಿದರು
ಕಾರ್ಯಾಗಾರದಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಯು.ರಂಗೇಗೌಡ, ಜಿಲ್ಲಾ ಸಂಘದ ಸಹ ಕಾರ್ಯದರ್ಶಿ ಎಸ್.ಮಹದೇವಯ್ಯ, ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ, ಮುಖಂಡರಾದ ಈರೇಗೌಡ, ಮುತ್ತೇಗೌಡ, ರಂಗಮ್ಮ, ಜಡೆಮಾದಮ್ಮ, ಭದ್ರಮ್ಮ, ನಂಜಮ್ಮ, ಮಾದೇವ, ಬಸವರಾಜು, ಜಡೇಸ್ವಾಮಿ, ಬಸವೇಗೌಡ, ಶಿವಣ್ಣ, ಏಟ್ರೀ ಸಂಸ್ಥೆಯ ಶಿವಕುಮಾರ್, ಸಿದ್ದಮ್ಮ ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.