ADVERTISEMENT

ಹನೂರು: ವಿದ್ಯುತ್ ತಂತಿ ತುಳಿದು ಗಂಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 11:25 IST
Last Updated 31 ಜನವರಿ 2021, 11:25 IST
ಮೃತಪಟ್ಟ ಆನೆಯ ಮೃತದೇಹವನ್ನು ಅಧಿಕಾರಿಗಳು ಪರಿಶೀಲಿಸಿದರು
ಮೃತಪಟ್ಟ ಆನೆಯ ಮೃತದೇಹವನ್ನು ಅಧಿಕಾರಿಗಳು ಪರಿಶೀಲಿಸಿದರು   

ಹನೂರು: ತಾಲ್ಲೂಕಿನ ಆಂಡಿಪಾಳ್ಯ ಗ್ರಾಮದ ಜಮೀನೊಂದರಲ್ಲಿ ಅಳವಡಿಸಿದ್ದ ವಿದ್ಯುತ್‌ ತಂತಿ ತಗುಲಿ 20 ವರ್ಷದ ಗಂಡಾನೆಯೊಂದು ಶನಿವಾರ ಮೃತಪಟ್ಟಿದೆ.

ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ‌) ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವನ್ಯಜೀವಿ ವಲಯ ವ್ಯಾಪ್ತಿಯ ಆಂಡಿಪಾಳ್ಯ ಗ್ರಾಮದ ಭಾಗ್ಯಮ್ಮ ಎಂಬುವವರು ತಮ್ಮ ಜಮೀನಿನಲ್ಲಿ ಜೋಳದ‌ ಫಸಲು ಬೆಳೆದಿದ್ದರು. ಅಲ್ಲದೇ ಜಮೀನಿನ ಸುತ್ತಲೂ ವಿದ್ಯುತ್ ಹಾಯಿಸಿದ್ದರು.

ಮೇವು ಅರಸಿಕೊಂಡು ಶನಿವಾರ ಮಧ್ಯರಾತ್ರಿ ಜಮೀನಿಗೆ ಬಂದಿದ್ದ ಆನೆ ವಿದ್ಯುತ್‌ ತಂತಿ ತುಳಿದು ಸ್ಥಳದಲ್ಲಿಯೇ ಮೃತಪಟ್ಟಿದೆ.ಭಾನುವಾರ ಬೆಳಿಗ್ಗೆ ಜಮೀನು ನೋಡಲು ಹೋದಾಗ ಆನೆಯ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಜಮೀನಿನ ಮಾಲೀಕರು ಊರನ್ನೇ ತೆರೆದಿದ್ದಾರೆ.

ADVERTISEMENT

ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು, ಪೊಲೀಸರು, ಸೆಸ್ಕ್ ಸಿಬ್ಬಂದಿ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.