ADVERTISEMENT

ಬೆಲೆ ಏರಿಕೆ ನಡುವೆಯೂ ಖರೀದಿ ಭರಾಟೆ

ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ಧತೆ; ಬಿರುಸಿನ ವ್ಯಾಪಾರಕ್ಕೆ ಮಳೆ ಅಡ್ಡಿ; ಹಣ್ಣು, ಹೂವಿನ ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 13:53 IST
Last Updated 8 ಆಗಸ್ಟ್ 2019, 13:53 IST
ಬಾಳೆ ಕಂದು, ಮಾವಿನ ಸೊಪ್ಪು ಖರೀದಿಯಲ್ಲಿ ನಿರತರಾಗಿರುವ ಮಹಿಳೆಯರು
ಬಾಳೆ ಕಂದು, ಮಾವಿನ ಸೊಪ್ಪು ಖರೀದಿಯಲ್ಲಿ ನಿರತರಾಗಿರುವ ಮಹಿಳೆಯರು   

ಚಾಮರಾಜನಗರ: ಶುಕ್ರವಾರದ ವರಮಹಾಲಕ್ಷ್ಮಿ ಹಬ್ಬಕ್ಕೆ ಜಿಲ್ಲೆಯಾದ್ಯಂತ ಸಿದ್ಧತೆ ಜೋರಾಗಿ ನಡೆಯುತ್ತಿದ್ದು, ಮಹಿಳೆಯರು ಮಹಾಲಕ್ಷ್ಮಿಯ ಪೂಜೆಗೆ ಸಂಭ್ರಮದಿಂದ ಸಜ್ಜುಗೊಳ್ಳುತ್ತಿದ್ದಾರೆ.

ಹಬ್ಬದ ಅಂಗವಾಗಿ ಮನೆಗಳಲ್ಲಿ ಪೂಜೆ ನಡೆದರೆ, ಕೆಲವು ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನಡೆಯಲಿದೆ. ಜಿಲ್ಲಾ ಕೇಂದ್ರ ಚಾಮರಾಜನಗರ ಸೇರಿದಂತೆ ಹಬ್ಬಕ್ಕಾಗಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಿತ್ತು. ಎಡೆಬಿಡದೆ ಸುರಿಯುತ್ತಿದ್ದ ಮಳೆ ವ್ಯಾಪಾರದ ಬಿರುಸಿಗೆ ಕೊಂಚ ಅಡ್ಡಿಯಾಯಿತು.

ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ತರಕಾರಿ ಮಾರುಕಟ್ಟೆ ಆವರಣ ಸೇರಿದಂತೆಗುರುವಾರಮಧ್ಯಾಹ್ನದಿಂದಲೇ ಬಹುತೇಕ ಕಡೆಗಳಲ್ಲಿ ವ್ಯಾಪಾರ ಆರಂಭವಾಗಿತ್ತು.

ADVERTISEMENT

ಮಹಿಳೆಯರೇ ಹೆಚ್ಚು:ಮಳೆಯನ್ನೂ ಲೆಕ್ಕಿಸದೆ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ಹೂ, ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳು ಹಾಗೂ ಅಲಂಕಾರಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಹಿಳೆಯರೇ ಹೆಚ್ಚಾಗಿ ಬಂದಿದ್ದು ವಿಶೇಷವಾಗಿತ್ತು. ವ್ಯಾಪಾರಿಗಳೊಂದಿಗೆ ಚೌಕಾಸಿ ನಡೆಸುತ್ತಿದ್ದ ದೃಶ್ಯವೂ ಕಂಡು ಬಂತು. ಬಾಳೆಕಂದು, ಬೇರಿ ಹಣ್ಣು, ನೈದಿಲೆ ಹಾಗೂ ಇನ್ನಿತರ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇತ್ತು.

ಗಗನಕ್ಕೇರಿದ ದರ: ಹಬ್ಬದಹಿಂದಿನ ದಿನಹೂ, ಹಣ್ಣುಗಳ ದರ ಗಗನಕ್ಕೇರಿತ್ತು. ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬಾಳೆ ಕಂದು, ಮಾವಿನ ಸೊಪ್ಪು, ಕಬ್ಬಿನ ಸೋಗೆ ಜೊತೆಯಾಗಿ₹40ಕ್ಕೆ ಮಾರಾಟ ಮಾಡುತ್ತಿದ್ದರು.

ಕನಕಾಂಬರ ಹೂವು ಕೆ.ಜಿ.ಗೆ ₹ 1,500ರಿಂದ₹ 2,000.,ಬಟನ್‌ರೋಜಾ ₹ 400,ಸುಗಂಧರಾಜ ಮತ್ತು ಹಾರ ₹ 90ರಿಂದ ₹240, ಮಲ್ಲಿಗೆ ₹ 800, ಹಾರಗಳು ₹ 40ರಿಂದ₹ 120, ಚೆಂಡು ಹೂ₹ 40ರಿಂದ₹ 50, ಗುಲಾಬಿ₹ 250ರಿಂದ ₹ 300, ಕಳಸದ ಹಾರ₹ 50ಕ್ಕೆ ಮಾರಾಟವಾಗುತ್ತಿತ್ತು. ವರಮಹಾಲಕ್ಷ್ಮಿ ಪೂಜೆಗೆ ಬೇಕಾದ ವೀಳ್ಯದ ಎಲೆ₹ 30ರಿಂದ ₹ 60, ರುದ್ರಾಕ್ಷಿ ಹಾರ₹ 250 ಇತ್ತು.

ಕಿತ್ತಳೆ, ದ್ರಾಕ್ಷಿ,ಮೂಸಂಬಿ, ದಾಳಿಂಬೆ(ಕೆ.ಜಿ.ಗೆ ₹80ರಿಂದ₹ 120) 100 ಗಡಿ ದಾಟಿದರೆ ಸೇಬು (₹ 160ರಿಂದ₹200) 200ರ ಗಡಿಗೆ ತಲುಪಿದೆ. ಉಳಿದಂತೆ ಸಪೋಟ, ಸೀತಾಫಲ, ಸೀಬೆ ಹಣ್ಣುಗಳ ಬೆಲೆ ಕೆ.ಜಿ.ಗೆ₹50ರಿಂದ₹ 80 ಇದೆ. ಏಲಕ್ಕಿ ಬಾಳೆ ದರ ಹೆಚ್ಚಳವಾಗಿದ್ದು ಬೆಲೆ₹ 60ರಿಂದ₹ 70 ಇತ್ತು. ಪಚ್ಚೆ ಬಾಳೆ₹ 30ರಿಂದ₹ 35 ಇತ್ತು.

ತಾವರೆ, ನೈದಿಲೆಗೆ ಬೇಡಿಕೆ: ವರಮಹಾಲಕ್ಷ್ಮಿಹಬ್ಬದ ಸಂದರ್ಭದಲ್ಲಿ ತಾವರೆ, ನೈದಿಲೆ ಹೂವಿಗೆ ಬೇಡಿಕೆ ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿ ಜೋಡಿ ಕಮಲದ ಬೆಲೆ₹40 ಇತ್ತು.ಸಾಮಾನ್ಯ ದಿನಗಳಲ್ಲಿ ಕಮಲದ ಹೂವನ್ನು ಯಾರೂ ಕೇಳುವುದಿಲ್ಲ. ಈ ಹಬ್ಬಕ್ಕೆ ಮಾತ್ರ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ತರಕಾರಿಗಳ ಪೈಕಿ ಬೀನ್ಸ್‌ (₹ 30–₹ 40), ಈರುಳ್ಳಿ(₹ 25–₹ 28), ನುಗ್ಗೆಕಾಯಿ(₹ 50–₹ 60) ಬೆಲೆ ಹೆಚ್ಚಳವಾಗಿದೆ. ಉಳಿದಂತೆ ಎಲ್ಲ ತರಕಾರಿಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಅಲಂಕಾರಿಕ ವಸ್ತುಗಳಿಗೂ ಬೇಡಿಕೆ
ಹಬ್ಬದ ಪ್ರಯುಕ್ತ ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಸಮೀಪದ ಅಂಗಡಿ ಮಳಿಗೆಗಳಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ವರಮಹಾಲಕ್ಷ್ಮಿ ದೇವಿಯ ಅಲಂಕಾರಿಕ ವಸ್ತುಗಳದ್ದೇ ಭರಾಟೆ. ಲಕ್ಷ್ಮೀ ದೇವಿಯಅಲಂಕಾರಕ್ಕೆಬಳೆ ಹಾಗೂಆಭರಣಗಳ ಖರೀದಿಯಲ್ಲಿ ಮಹಿಳೆಯರು ನಿರತರಾಗಿದ್ದರು. ಬಳೆ ಅಂಗಡಿಗಳಲ್ಲಂತೂ ನಿಲ್ಲಲೂ ಜಾಗವಿಲ್ಲದಷ್ಟು ಜನ ದಟ್ಟಣೆ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.