ಚಾಮರಾಜನಗರ: ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಜಿಲ್ಲೆಯ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಅವರು ಭಾನುವಾರ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ನಾನು ಶಾಸಕನಾಗಿದ್ದಾಗ ಅಂಬೇಡ್ಕರ್ ಕ್ರೀಡಾಂಗಣ ಮಾಡಿದ್ದೆ. ಅದರ ಅಭಿವೃದ್ಧಿ ಕೆಲಸ ಇನ್ನೂ ಆಗಿಲ್ಲ. ಕಾಮಗಾರಿ ಪೂರ್ಣಗೊಳಿಸಲು ₹30 ಕೋಟಿ ಅನುದಾನ ಬೇಕು‘ ಎಂದರು.
’ಅರಿಸಿನ ಹೆಚ್ಚಾಗಿ ಬೆಳೆಯುವ ಈ ನಾಡಿನಲ್ಲಿ ಅರಿಸಿನ ಬೆಳೆ ಅಭಿವೃದ್ಧಿಗೆ ಏನೇನೂ ಮಾಡಿಲ್ಲ. ಕೈಗಾರಿಕಾ ಪ್ರದೇಶಕ್ಕೆ ಉದ್ದಿಮೆಗಳು ಬಂದಿಲ್ಲ. ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ.ಚಾಮರಾಜನಗರ ಜಿಲ್ಲೆಯಾಗಿ 24 ವರ್ಷಗಳು ಕಳೆದಿದೆ. ಯಾವುದೇ ಇಲಾಖೆಗಳು ಅಭಿವೃದ್ಧಿಗೆ ಗಮನಹರಿಸಿಲ್ಲ‘ ಎಂದು ಅವರು ದೂರಿದರು.
ಸದನದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ’ಸದನದಲ್ಲಿ ಚರ್ಚೆ ಮಾಡುವ ವಿಚಾರಗಳು ಬಹಳಷ್ಟು ಇವೆ. ಅದರ ಬಗ್ಗೆ ಚರ್ಚೆ ಮಾಡಲಿ. ಅದನ್ನು ಬಿಟ್ಟು ಕಾಂಗ್ರೆಸ್ನವರು ಒಬ್ಬ ಸಚಿವ ಈಶ್ವರಪ್ಪ ಅವರ ವಿರುದ್ಧ ಹೋರಾಡುತ್ತಿರುವುದು ಸರಿಯಲ್ಲ. ಈಶ್ವರಪ್ಪ ಅವರನ್ನು ದೇಶದ್ರೋಹಿ ಅನ್ನುವುದು ಸರಿಯಲ್ಲ. ಅವರ ಹಾರಾಟ, ಕೂಗಾಟ ಹೊಸದೇನೂ ಅಲ್ಲ‘ ಎಂದರು.
ಸಮವಸ್ತ್ರ ವಿಚಾರದಲ್ಲಿ ವಿದ್ಯಾರ್ಥಿಗಳು, ಪೋಷಕರು ಶಾಂತಿ ಕದಡುವ ಕೆಲಸ ಮಾಡಬಾರದು ಪ್ರಶ್ನೆಯೊಂದಕ್ಕೆ ವಾಟಾಳ್ ನಾಗರಾಜ್ ಅವರು ಉತ್ತರಿಸಿದರು.
ನಾಗರಾಜಮೂರ್ತಿ, ಹುಂಡಿ ಬಸವಣ್ಣ, ಶಿವಲಿಂಗಮೂರ್ತಿ, ವರದರಾಜು, ಮಹೇಶ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.