ಯಳಂದೂರು: 'ಬಾಲಕಿಯರಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡುವಂತಿಲ್ಲ. ಮಕ್ಕಳಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಬೇಕು. ಅವರ ಅನುಮತಿ ಪಡೆದೇ ಮದುವೆ ಮಾಡಬೇಕು’ ಎಂಬ ತೀರ್ಮಾನವನ್ನು ತಾಲ್ಲೂಕಿನಕೃಷ್ಣಪುರ ಗ್ರಾಮದ ಉಪ್ಪಾರ ಮುಖಂಡರು ತೆಗೆದುಕೊಂಡಿದ್ದಾರೆ.
ಕಳೆದ ವಾರ ಗ್ರಾಮದಲ್ಲಿ ಬಾಲಕಿಯೊಬ್ಬಳಿಗೆ ಮದುವೆ ಮಾಡುವ ಯತ್ನ ನಡೆದಿತ್ತು. ಬಾಲಕಿಯ ಸ್ನೇಹಿತರು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮದುವೆ ತಪ್ಪಿಸಿದ್ದರು. ಆ ಪ್ರಕರಣದಿಂದ ಎಚ್ಚೆತ್ತಿರುವ ಸಮುದಾಯದ ಮುಖಂಡರು ಬುಧವಾರ ಸಭೆ ಸೇರಿ ಈ ನಿರ್ಣಯ ಕೈಗೊಂಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಯಜಮಾನ ನಂಜುಂಡಶೆಟ್ಟಿ, ‘ಹೆಣ್ಣು ಮಕ್ಕಳಿಗೆ18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ಪೂರೈಸಿದ ನಂತರವೇ ಪೋಷಕರು ಮದುವೆ ಮಾಡಲು ಮುಂದಾಗಬೇಕು. ಮಕ್ಕಳ ಶಿಕ್ಷಣಕ್ಕೆ ಪೋಷಕರು ಒತ್ತುನೀಡಬೇಕು’ ಎಂದರು.
'ಬಾಲ್ಯ ವಿವಾಹ ಮಾಡಿದರೆ ಕಾನೂನಾತ್ಮಕ ಸಮಸ್ಯೆ ಎದುರಾಗುತ್ತವೆ. ವಿವಾಹಆಯೋಜಿಸುವ ಛತ್ರ, ತಂದೆ-ತಾಯಿ, ವಯಸ್ಸಿನ ತಪ್ಪು ದೃಢೀಕರಣ ನೀಡಿದ ಅಧಿಕಾರಿ, ವಧು-ವರಎಲ್ಲರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿಯಲ್ಲಿ ತಪ್ಪಿತಸ್ಥರಿಗೆ ಜೈಲುವಾಸ ಮತ್ತು ದಂಡ ವಿಧಿಸಲು ಇಲ್ಲವೇ ಎರಡೂ ಶಿಕ್ಷೆಯನ್ನುಏಕಕಾಲದಲ್ಲಿ ವಿಧಿಸಲು ಅವಕಾಶ ಇರುವುದರಿಂದ ಉಪ್ಪಾರ ಸಮುದಾಯ ಎಚ್ಚರ ವಹಿಸಬೇಕು' ಎಂದು ಮುಖಂಡ ರಾಚಶೆಟ್ಟಿಹೇಳಿದರು.
ಇಬ್ಬರ ಮಾತಿಗೂ ಮನ್ನಣೆ ನೀಡಿದ ಗ್ರಾಮಸ್ಥರುಪ್ರಮಾಣ ಮಾಡುವ ಮೂಲಕ ಬಾಲ್ಯ ವಿವಾಹನಿಷೇಧಕ್ಕೆ ಒಕ್ಕೊರಲಿನಿಂದ ಸಮ್ಮತಿಸಿದರು.
ಗ್ರಾಮಸ್ಥರ ನಿರ್ಣಯದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್, 'ಕೃಷ್ಣಪುರ ಗ್ರಾಮಸ್ಥರ ನಡೆ ಮಾದರಿಯಾದಂತಹದ್ದು. ಮಕ್ಕಳ ಭವಿಷ್ಯದದೃಷ್ಟಿಯಿಂದ ಬಾಲ್ಯ ವಿವಾಹ ನಿಷೇಧಿಸಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಒತ್ತು ನೀಡಿದ್ದಾರೆ. ಇಂತಹ ಕ್ರಮಗಳಿಂದ ಬಾಲ್ಯ ವಿವಾಹ ಮುಕ್ತ ಜಿಲ್ಲೆಯ ನಿರ್ಮಾಣಕ್ಕೆ ಅನುಕೂಲವಾಗಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.