ಚಾಮರಾಜನಗರ: ತಾಲ್ಲೂಕಿನ ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮೂಡಹಳ್ಳಿಗೆ ಮುಖ್ಯರಸ್ತೆ, ಶಾಲೆ, ಅಂಗನವಾಡಿ, ಬಸ್ ಸೌಲಭ್ಯ ನ್ಯಾಯ ಬೆಲೆ ಅಂಗಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ.
ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರದ ಪ್ಲೆಕ್ಸ್ ಹಾಕಲಾಗಿದೆ. ಬುಧವಾರ ಗ್ರಾಮದಲ್ಲಿ ಸೇರಿದ ಗ್ರಾಮಸ್ಥರು ತಮ್ಮ ಬೇಡಿಕೆಗಳ ಘೋಷಣೆ ಕೂಗಿದರು.
‘ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿ 209ರಿಂದ ಮುಖ್ಯರಸ್ತೆ ನಿರ್ಮಾಣ ಮಾಡಿಕೊಡಬೇಕು. ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆ, ಅಂಗನವಾಡಿ ಆರಂಭಿಸಬೇಕು, ಬಸ್ ಸೌಲಭ್ಯ, ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ದೂರಿದರು.
‘ಗ್ರಾಮಕ್ಕೆ ಮುಖ್ಯರಸ್ತೆ ಇಲ್ಲದ ಕಾರಣದಿಂದ ಹೆರಿಗೆ ಸೇರಿದಂತೆ ಆರೋಗ್ಯ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ಗೆ ಕರೆ ಮಾಡಿದರೆ ‘ನಿಮ್ಮೂರಿನ ರಸ್ತೆ ಸರಿ ಇಲ್ಲ’ ಎಂದು ಹೇಳಿ ಯಾರೂ ಬರುವುದಿಲ್ಲ. ಇದರಿಂದ ತುಂಬಾ ತೊಂದರೆಯಾಗಿದೆ. ಜಿಲ್ಲಾಡಳಿತ ಕೂಡಲೇ ಗ್ರಾಮದ ಸಮಸ್ಯೆ ಬಗೆಹರಿಸಬೇಕು. 26ರಂದು ನಡೆಯಲಿರುವ ಮತದಾನ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಸಿದರು.
ಮಹದೇವಮ್ಮ, ಪಾರ್ವತಮ್ಮ, ಶ್ರೀಧರ್, ಮಹೇಂದ್ರ, ಸಿದ್ದರಾಜು, ನಂಜಮ್ಮ, ಜಯಮ್ಮ, ಪುಟ್ಟಮ್ಮ, ಸಾಕಮ್ಮ ಇತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.