ADVERTISEMENT

ಸ್ಮಾರಕವಾಗಿ ಉಳಿದ ನೀರಿನ ಘಟಕಗಳು!

ಯಳಂದೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೆಟ್ಟುನಿಂತ ಘಟಕಗಳು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 20:12 IST
Last Updated 6 ಡಿಸೆಂಬರ್ 2018, 20:12 IST
ಯಳಂದೂರು ತಾಲೂಕಿನ ಅಂಬಳೆ-----– 02 ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದೆ
ಯಳಂದೂರು ತಾಲೂಕಿನ ಅಂಬಳೆ-----– 02 ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದೆ   

ಯಳಂದೂರು: ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ನೀರು ಪೂರೈಸುವ ಉದ್ದೇಶದಿಂದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಹಲವು ತಿಂಗಳುಗಳೇ ಕಳೆದಿವೆ. ಉದ್ಘಾಟನೆಗೊಂಡ ಘಟಕಗಳ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದರೆ, ಮತ್ತೆ ಕೆಲ ಘಟಕಗಳಿಗೆ ಉದ್ಘಾಟನೆ ಭಾಗ್ಯವೇ ಸಿಕ್ಕಿಲ್ಲ.

ತಾಲ್ಲೂಕಿನ ಹೊನ್ನೂರು, ಯರಿಯೂರು, ಮದ್ದೂರು, ಮಾಂಬಳ್ಳಿ, ಯರಗಂಬಳ್ಳಿ, ಅಂಬಳೆ– 2 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಕಾಮಗಾರಿ ನವೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಹೊನ್ನೂರು, ಮಾಂಬಳ್ಳಿ, ಕೆಸ್ತೂರು, ಮದ್ದೂರು ಗ್ರಾಮಗಳಲ್ಲಿ ಉದ್ಘಾಟನೆಯನ್ನೂ ಮಾಡಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅವು ಕೆಟ್ಟು ಹೋದವು. ಮತ್ತೆ ದುರಸ್ತಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಯರಿಯೂರು ಜಯಣ್ಣ, ರಾಮಾಪುರ ರಂಗಸ್ವಾಮಿ ಆರೋಪಿಸುತ್ತಾರೆ.

₹9.85 ಲಕ್ಷ ವೆಚ್ಚದಲ್ಲಿ ಭೂ ಸೇನಾ ನಿಗಮದ ಕೊಳ್ಳೇಗಾಲ ವಿಭಾಗವು ಎಸ್ಇಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ನಿರ್ಮಿಸಿದೆ. ಕೆಲವೆಡೆ ಘಟಕಗಳು ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಇಲಾಖೆಯ ನಿರ್ಲಕ್ಷ್ಯದಿಂದ ಕೆಲಸ ಕುಂಟುತ್ತಾ ಸಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಹದೇವಶೆಟ್ಟಿ ದೂರಿದರು.

ADVERTISEMENT

ಬಹುತೇಕ ಗ್ರಾಮಗಳಲ್ಲಿ ಪೂರೈಕೆಯಾಗುವ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಿದೆ. ನೀರಿನ ಘಟಕಗಳು ನಿರ್ಮಾಣ ಹಂತದಲ್ಲೇ ಇವೆ. ಕೆಲವೆಡೆ ನಿರ್ವಹಣೆ ಇಲ್ಲದೆ ಸೊರಗಿವೆ. ಕೆಲವು ಕೆಟ್ಟು ನಿಂತಿವೆ. ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಅಂಬಳೆ ಮನು, ಹೊನ್ನೂರು ಸಿದ್ದರಾಜು ಆಗ್ರಹಿಸಿದರು.

ದುರಸ್ತಿ ಪಡಿಸಲು ಗುತ್ತಿಗೆದಾರರಿಗೆ ಸೂಚನೆ:

ತಾಲ್ಲೂಕಿನ 7 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಈಗಾಗಲೇ ಚಾಲನೆ ನೀಡಲಾಗಿತ್ತು. ಕೆಲವೆಡೆ ಕಾಮಗಾರಿಗಳು ಪೂರ್ಣಗೊಂಡಿವೆ. ಕೆಲವು ಕಾರ್ಯನಿರ್ವಹಿಸುತ್ತಿಲ್ಲ. ಇವುಗಳನ್ನು ದುರಸ್ತಿ ಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕೆಲವೆಡೆ ಜಾಗದ ಸಮಸ್ಯೆಯಿಂದ ಅಡೆತಡೆ ಉಂಟಾಗಿದೆ. ಉಳಿದ ಕೆಲವು ಘಟಕಗಳನ್ನು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು ಎಂದು ಭೂ ಸೇನಾ ಇಲಾಖೆಯ ಎಇಇ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.