ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರವೂ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿತ್ತು. ರಜಾ ದಿನವೂ ಆಗಿದ್ದರಿಂದ ವಾಹನಗಳ ಹಾಗೂ ಜನರ ಓಡಾಟ ಕಡಿಮೆ ಇತ್ತು.
ಹಣ್ಣು, ತರಕಾರಿ, ಹಾಲು, ದಿನಸಿ ಅಂಗಡಿಗಳು ಮಧ್ಯಾಹ್ನದ ವರೆಗೆ ತೆರೆದಿದ್ದವು. ಕೆಲವು ಹೋಟೆಲ್ಗಳು ಇಡೀ ದಿನ ಕಾರ್ಯಾಚರಿಸಿದವು.
ಸಾಮಾನ್ಯವಾಗಿ ನಗರದಲ್ಲಿ ಹೋಟೆಲ್, ದಿನಸಿ ಅಂಗಡಿಗಳ ಮಾಲೀಕರು ಭಾನುವಾರ ರಜೆಯ ಕಾರಣಕ್ಕೆ ಅಂಗಡಿಗಳನ್ನುತೆರೆಯುವುದಿಲ್ಲ. ಹಾಗಾಗಿ, ಕೆಲವು ದಿನಸಿ ಅಂಗಡಿಗಳು ಹಾಗೂ ಹೋಟೆಲ್ಗಳು ತೆರೆದಿರಲಿಲ್ಲ.
ಮದ್ಯದ ಅಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ವಹಿವಾಟು ನಡೆಸಿದವು. ಪಾರ್ಸೆಲ್ ಮಾತ್ರ ಲಭ್ಯವಿತ್ತು. ಬೀದಿ ಬದಿ ವ್ಯಾಪಾರಿಗಳು ಮಧ್ಯಾಹ್ನದವರೆಗೆ ವ್ಯಾಪಾರ ನಡೆಸಲು ಅಡಚಣೆ ಇರಲಿಲ್ಲ. ಕೆಎಸ್ಆರ್ಟಿಸಿ ಬಸ್ಗಳು ಭಾನುವಾರವೂ ಸಂಚರಿಸಿದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.
ಮಧ್ಯಾಹ್ನ 2 ಗಂಟೆ ಆಗುತ್ತಲೇ ಪೊಲೀಸರು ಎಲ್ಲ ಬೀದಿಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಸೂಚಿಸಿದರು.
ಚೆಕ್ಪೋಸ್ಟ್ಗಳಲ್ಲಿ ಬಿಗಿ ಕ್ರಮ: ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿ ಇದ್ದುದರಿಂದ ಅಂತರರಾಜ್ಯ ಚೆಕ್ಪೋಸ್ಟ್ಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ಪ್ರಯಾಣಿಕರು ಆರ್ಟಿ–ಪಿಸಿಆರ್ ನೆಗೆಟಿವ್ ವರದಿ ಹೊಂದಿದ್ದರೂ, ಜಿಲ್ಲೆಯ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.