ADVERTISEMENT

ಎಸ್‌ಸಿ ಕಾರಣಕ್ಕೆ ಡೇರಿಯಲ್ಲಿ ಕೆಲಸ ಕೊಡುತ್ತಿಲ್ಲ: ಮಹಿಳೆ ಅಳಲು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 6:16 IST
Last Updated 4 ಏಪ್ರಿಲ್ 2024, 6:16 IST
ಕವಿತಾ ನೊಂದ ಮಹಿಳೆ
ಕವಿತಾ ನೊಂದ ಮಹಿಳೆ   

ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ‘ತಾಲ್ಲೂಕಿನ ಜಕ್ಕಳ್ಳಿಯ ಹೊಸ ನಗರದ ಹಾಲು ಉತ್ಪಾದಕರ ಸಂಘದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ’ ಎಂದು ಸಂಘದಲ್ಲಿ ಹಾಲು ಪರಿವೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಕವಿತಾ ಅವರು ದೂರಿದ್ದಾರೆ. 

ಪರಿಶಿಷ್ಟ ಜಾತಿಗೆ ಸೇರಿರುವ ಅವರು, ಜಕ್ಕಳ್ಳಿಯ ಕ್ರಿಶ್ಚಿಯನ್‌ ಸಮದಾಯದ ವ್ಯಕ್ತಿಯನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಎರಡು ವರ್ಷದಿಮದ ಸಂಘದಲ್ಲಿ ಕೆಲಸ ಮಾಡುತ್ತಿದ್ದರು. ಐದು ತಿಂಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮತ್ತೆ ಕೆಲಸಕ್ಕೆ ಬರುವವರೆಗೆ ಅದೇ ಗ್ರಾಮದ ನಿರ್ಮಲ ಮೇರಿ ಎಂಬುವವರನ್ನು ಕೆಲಸ ಮಾಡುವಂತೆ ಹೇಳಿದ್ದರು.

‘5 ತಿಂಗಳ ಬಳಿಕ ಕೆಲಸಕ್ಕೆ ಹೋದಾಗ ಕಾರ್ಯದರ್ಶಿ ಸುರೇಶ್, ನಿರ್ದೇಶಕ ಸಗಯರಾಜು, ನಿರ್ಮಲ ಮೇರಿ ಅವರು ‘ನೀನು ಪರಿಶಿಷ್ಟ ಜಾತಿಯವಳು. ಹಾಲು ಮುಟ್ಟಬೇಡ, ಕೆಲಸಕ್ಕೆ ಬರಬೇಡ’ ಎಂದು ಹೇಳಿದರು’ ಎಂದು ಕವಿತಾ ಆರೋಪಿಸಿದ್ದಾರೆ.

ADVERTISEMENT

‘ಇದೇ ಕೆಲಸವನ್ನು ನಂಬಿ ಜೀವನ ಸಾಗಿಸುತ್ತಿದ್ದೆ. ಪರಿಶಿಷ್ಟ ಜಾತಿಯಲ್ಲಿ ಹುಟ್ಟಿದ್ದೇ ತಪ್ಪಾಗಿದೆ. ನಮಗೆ ಒಂದು ತೊಟ್ಟು ವಿಷಕೊಟ್ಟು ಸಾಯಿಸಿ ಬಿಡಿ’ ಎಂದು ಮಾಧ್ಯಮಗಳಿಗೆ ತಿಳಿಸಿರುವ ಕವಿತಾ, ‘ಗುರುವಾರ ಬೆಳಿಗ್ಗೆ ಪೊಲೀಸ್ ಠಾಣೆಗೆ ಹಾಗೂ ಸಂಬಂಧಪಟ್ಟವರಿಗೆ ದೂರು ನೀಡುವೆ’ ಎಂದು ಹೇಳಿದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ‘ಈ ವಿಚಾರ ಈಗ ತಾನೇ ಗಮನಕ್ಕೆ ಬಂದಿದೆ. ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಕವಿತಾ ಅವರೊಂದಿಗೆ ಚರ್ಚಿಸುವೆ. ಅಸ್ಪೃಶ್ಯತೆ ಆಚರಣೆ ನಡೆಯುತ್ತಿದ್ದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.