ಯಳಂದೂರು: ತಾಲ್ಲೂಕಿನ ಮಲ್ಲಿಗೆಹಳ್ಳಿ, ಕಟ್ನವಾಡಿ ಹಾಗೂ ಕೆಸ್ತೂರು ಗ್ರಾಮಗಳಲ್ಲಿ ಓಡಾಡುತ್ತಿರುವ ಚಿರತೆ ಶಾಲಾ ಮಕ್ಕಳು ಮತ್ತು ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದ್ದು, ಅವರಲ್ಲಿನ ಭಯ ನಿವಾರಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಭದ್ರತೆ ನೀಡುವುದರ ಜೊತೆಗೆ ವನ್ಯಜೀವಿಗಳ ಮಹತ್ವ ಮತ್ತು ಸಂರಕ್ಷಣಾ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಮೂರು ದಿನಗಳ ಹಿಂದೆ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಬಾಲಕನೊಬ್ಬನ ಮೇಲೆ ಚಿರತೆ ದಾಳಿ ಮಾಡಿತ್ತು.
ಪೋಷಕರು ಶಾಲೆಯ ಸುತ್ತಮುತ್ತ ಚಿರತೆ ಸಂಚರಿಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದನ್ನು ಮನಗಂಡ ಇಲಾಖೆಗಳು ಶಾಲೆಗೆ ತೆರಳಿ ವನ್ಯ ಜೀವಿಗಳಿಂದ ರಕ್ಷಣೆ ಪಡೆಯಲು ಅನುಸರಿಸಬೇಕಾದ ತಂತ್ರಗಳನ್ನು ಮಕ್ಕಳಿಗೆ ತಿಳಿಸುತ್ತಿದ್ದಾರೆ. ಚಿರತೆ ಕಾಣಿಸಿಕೊಂಡ ಗ್ರಾಮಗಳಲ್ಲಿ ಗಸ್ತು ಹೆಚ್ಚಿಸಿದ್ದಾರೆ.
ಭಯಭೀತರಾದ ಮಕ್ಕಳನ್ನು ಸ್ವತಃ ಶಾಲೆಗೆ ಕರೆದುಕೊಂಡು ಬರುತ್ತಿದ್ದಾರೆ.
'ಸುಮಾರು 1500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಸೂರು ಕೆಸ್ತೂರು ಕಟ್ ಮಾಡಿ ಮಲ್ಲಿಗೆಹಳ್ಳಿ ಸುತ್ತಮುತ್ತಲ ಇದ್ದಾರೆ. ಶಾಲೆಗಳು ಊರ ಹೊರ ಬದಿಯಲ್ಲಿ ಇವೆ. ಚಿರತೆ ಇಲ್ಲವೇ ಹುಲಿ ಮಾನವನಿಗೆ ತೊಂದರೆ ಕೊಡುವುದಿಲ್ಲ. ಅಪಾಯ ಎದುರಾದಾಗ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ದಾಳಿ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ವನ್ಯಜೀವಿಗಳನ್ನು ಜನರು ಗಾಸಿಗೊಳಿಸಬಾರದು. ಕೂಗಾಟ ರಂಪಾಟ ಮಾಡದಂತೆ ಜಾಗೃತಿ ಮೂಡಿಸಲು ಶಾಲೆಗಳಲ್ಲಿ ಮಾಹಿತಿ ನೀಡಲಾಗುತ್ತಿದ್ದ' ಎಂದು ಆರ್ ಎಫ್ ಒ ಲೋಕೇಶ್ ಮೂರ್ತಿ ಮಾಹಿತಿ ನೀಡಿದರು.
'ಯಳಂದೂರು ವನ್ಯಜೀವಿ ವಲಯದ ಕಾಡಂಚಿನ ಶಾಲೆಗಳಲ್ಲಿ ವರ್ಷಪೂರ್ತಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಹುಲಿ, ಚಿರತೆಗಳ ಮಹತ್ವವನ್ನು ಬಿಂಬಿಸಲಾಗುತ್ತಿದೆ. ಚಿರತೆ ಕಾಣಿಸಿಕೊಂಡ ಗ್ರಾಮಗಳಲ್ಲೂ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ. ಸಿಬ್ಬಂದಿ ಶಾಲೆಗಳಲ್ಲಿಯೇ ತಂಗಲು ವ್ಯವಸ್ಥೆ ಮಾಡಿದ್ದೇವೆ. ವಿದ್ಯಾರ್ಥಿಗಳು ಶಾಲೆ ತಪ್ಪಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ' ಎಂದು ಅವರು ಮಾಹಿತಿ ನೀಡಿದರು.
'ಪ್ರತಿದಿನ ಶಾಲೆಗಳ ಸುತ್ತಮುತ್ತ ವನಪಾಲಕರು ಗಸ್ತು ತಿರುಗುತ್ತಾರೆ. ಕೆಲವರು ರಾತ್ರಿ ವೇಳೆ ಸಮೀಪದಲ್ಲಿ ಕ್ಯಾಂಪ್ ಹಾಕಿ ಉಳಿದಿದ್ದಾರೆ. ಚಿರತೆ ಬೇರೆ ಸ್ಥಳಾಂತರ ವಾಗಿರುವುದನ್ನು ಖಚಿತಪಡಿಸಿಕೊಂಡ ನಂತರ ತೆರಲಿದ್ದಾರೆ. ಹಾಗಾಗಿ ಮಕ್ಕಳು ನಿರ್ಭಯದಿಂದ ಸಂಚರಿಸಬಹುದು' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.