ADVERTISEMENT

ಅಂಗವಿಕಲೆ ಆದಿಲಕ್ಷ್ಮೀಗೆ ಬೇಕಿದೆ ನೆರವು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 5:53 IST
Last Updated 3 ಡಿಸೆಂಬರ್ 2013, 5:53 IST

ಮೊಳಕಾಲ್ಮುರು: ತಾಲ್ಲೂಕಿನ ಬಿ.ಜಿ.ಕೆರೆಯ ಅಂಗವಿಕಲೆ ಆದಿಲಕ್ಷ್ಮೀ ಪೂರ್ಣ ಪ್ರಮಾಣದ ಅಂಗವಿಕಲ ವೇತನ ಪಡೆಯಲು ಎಲ್ಲಾ ಅರ್ಹತೆ ಹೊಂದಿದ್ದರೂ ತಾಲ್ಲೂಕು ಆಡಳಿತದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತೊಂದರೆಗೆ ಸಿಲುಕಿದ್ದಾರೆ.

28 ವರ್ಷದ ಆದಿಲಕ್ಷ್ಮೀಗೆ ಕಿವಿಗಳು ಕೇಳುವುದಿಲ್ಲ, ಪೂರ್ಣವಾಗಿ ಮಾತು ಬರುವುದಿಲ್ಲ, ಎರಡು ಕಾಲುಗಳ ಪೈಕಿ ಎಡಗಾಲು ಪೂರ್ಣ ಸ್ವಾಧೀನ ಕಳೆದುಕೊಂಡಿದೆ. ಊರುಕೋಲು ನಿಂತುಕೊಳ್ಳಲು ಆಸರೆಯಾಗಿವೆ. ಕೈಸನ್ನೆ ಮೂಲಕ ಬೇಕು, ಬೇಡವನ್ನು ಕೇಳಬೇಕಿದೆ. ನಿತ್ಯಕರ್ಮಗಳಿಗೆ ತಾಯಿ ವಿದ್ಯಾವತಿ ನೆರವು ಕಡ್ಡಾಯ ಎಂಬ ಸ್ಥಿತಿಯಲ್ಲಿ ದಿನಗಳನ್ನು ನೂಕುತ್ತಿದ್ದಾಳೆ ಆದಿಲಕ್ಷ್ಮೀ.

ಜಿಲ್ಲಾಸ್ಪತ್ರೆ ವೈದ್ಯರು ಪೂರ್ಣ ಪ್ರಮಾಣದ ಅಂಗವಿಕಲೆ ಎಂಬ ಸರ್ಟಿಫಿಕೇಟ್‌ ನೀಡಿದ್ದಾರೆ. ಇದನ್ನು ತಾಲ್ಲೂಕು ಆಡಳಿತಕ್ಕೆ ಸಲ್ಲಿಸಿ ರೂ 1200 ಪೂರ್ಣ ಪ್ರಮಾಣದ ಮಾಸಾಶನಕ್ಕೆ ಅರ್ಜಿ ಸಲ್ಲಿಸಿ ಹಲವು ತಿಂಗಳುಗಳು ಕಳೆದಿವೆ. ಈ ಹಿಂದೆಯೇ ಮಾಸಾಶನ ಕೊಡಿಸುವುದಾಗಿ ಹೇಳಿದವರಿಗೆ ಹಣ ನೀಡಿ ಕೈಸುಟ್ಟುಕೊಂಡಿದ್ದೂ ಆಗಿದೆ. ಆದರೆ ನ್ಯಾಯಯುತವಾಗಿ ಸಲ್ಲಬೇಕಾದ ಪೂರ್ಣಪ್ರಮಾಣದ ಮಾಸಾಶನ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪೋಷಕರು ದೂರುತ್ತಾರೆ.

ಈಗ ರೂ400 ಮಾಸಾಶನ ನೀಡುತ್ತಿದ್ದಾರೆ. ಅದೂ ಸಹ ಮೂರು ತಿಂಗಳಿನಿಂದ ಬಂದಿಲ್ಲ, ಸಂಬಂಧಪಟ್ಟ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಇತ್ತ ಗಮನಹರಿಸಿ ಪೂರ್ಣ ಪ್ರಮಾಣದ ಮಾಸಾಶನ ಕೊಡಿಸಲು ಮುಂದಾಗುವ ಜತೆಗೆ ಮೂರು ಚಕ್ರದ ವಾಹನ ಕೊಡಿಸುವ ಮೂಲಕ ವಿಶ್ವ ಅಂಗವಿಕಲರ ದಿನಾಚರಣೆಗೆ ಅರ್ಥ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.