ADVERTISEMENT

ಅರ್ಹ, ಪ್ರಾಮಾಣಿಕ ಅಭ್ಯರ್ಥಿಗೆ ಮತ ನೀಡಿ

ಚುನಾವಣಾ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್. ಕೋರಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 9:14 IST
Last Updated 7 ಮಾರ್ಚ್ 2018, 9:14 IST
ಅಧಿಕಾರಿಗಳು ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಅಧಿಕಾರಿಗಳು ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.   

ಚಿಕ್ಕಬಳ್ಳಾಪುರ: ‘ಮತದಾರ ತನ್ನ ಮತವನ್ನು ಯಾವುದೇ ಪೂರ್ವಗ್ರಹ ವಿಲ್ಲದೆ ಪ್ರಾಮಾಣಿಕ, ಯೋಗ್ಯ ಅಭ್ಯರ್ಥಿಗೆ ಚಲಾಯಿಸಬೇಕು. ಆಗ ಸಂವಿಧಾನದ ಆಶಯದ ಪ್ರಜಾ ಪ್ರಭುತ್ವ ವ್ಯವಸ್ಥೆ ನಾವು ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಡ್ಡಾಯ ವಾಗಿ ಮತ ಚಲಾಯಿಸಬೇಕು’ ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್. ಕೋರಡ್ಡಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಲಾಂಛನ ಬಿಡುಗಡೆ ಮತ್ತು ‘ಸ್ವೀಪ್’ ಸಮಿತಿ ಚಟುವಟಿಕೆಗಳ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೆಚ್ಚು ಯುವಜನರನ್ನು ಹೊಂದಿರುವ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಇಚ್ಛೆಯಂತೆ ಆಡಳಿತ ನಡೆಯಬೇಕು. ಮತದಾನದಿಂದ ಮಾತ್ರ ಮುಂದಿನ ಭವಿಷ್ಯ ನಿರ್ಧರಿಸುವುದು ಸಾಧ್ಯ. ಹೀಗಾಗಿ, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳುವ ಜತೆಗೆ ಪ್ರತಿ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಬೇಕಿದೆ’ ಎಂದು ಹೇಳಿದರು.

ADVERTISEMENT

‘ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾ ಪ್ರಭುತ್ವದ ಹಿತ ಕಾಪಾಡಲು ಎಲ್ಲರೂ ಮುಂದಾಗಬೇಕು. ಮತದಾರರು ಮೊದಲು ಪ್ರಾಮಾಣಿಕರಾಗಿ ಉಳಿ ಯುವ ಜತೆಗೆ ಪ್ರಾಮಾಣಿಕರಿಗೆ ಮತ ಹಾಕಬೇಕು. ಆಗ ಮಾತ್ರ ದೇಶವನ್ನು ಸ್ವಚ್ಛವಾಗಿಡಲು ಸಾಧ್ಯ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗೌರವ, ಘನತೆ ತರಲು ಸಾಧ್ಯ’ ಎಂದರು.

‘ಪ್ರತಿಯೊಬ್ಬರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಬೇಕು. ಮತಗಟ್ಟೆಗಳಿಗೆ ಬರಲಾಗದ ಪರಿಸ್ಥಿತಿ ಇದ್ದರೆ ಅಂಚೆ ಮೂಲಕ ಮತ ಚಲಾಯಿಸಿ, ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕು. ಈ ವಿಚಾರದಲ್ಲಿ ಅýಧಿಕಾರಿಗಳು ಕೂಡ ಮೊದಲು ಜಾಗೃತರಾಗಬೇಕು. ಮತದಾನದ ಪ್ರಯೋಜನ, ಅದರ ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ಯಾವುದೋ ಕಟ್ಟುಪಾಡುಗಳಿಗೆ ಬಲಿ ಯಾಗಿ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳಬಾರದು. ಕಾನೂನು ವ್ಯಾಪ್ತಿಯಲ್ಲಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್‌ ಹೆಗ್ಡೆ ಮಾತನಾಡಿ, ‘ದೇಶದ ಆಡಳಿತ ನಿರ್ಧರಿಸುವುದು ಬರೀ ಮತದಾರರಿಂದ ಮಾತ್ರ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಜವಾ ಬ್ದಾರಿಯುತವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು’ ಎಂದು ಹೇಳಿದರು.

‘ಶ್ರೀಮಂತ, ಬಡವನ ಮತಕ್ಕೆ ಮೌಲ್ಯ ಒಂದೇ. ಮತ ಎಂಬುದು ಒಂದು ಅಸ್ತ್ರ ಇದ್ದಂತೆ. ಯೋಗ್ಯ ವ್ಯಕ್ತಿಯನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮತದ ಮೂಲಕ ನಮ್ಮ ನಿಲುವನ್ನು ವ್ಯಕ್ತಪಡಿಸಬಹುದು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.
***
ಕಡ್ಡಾಯ ಮತದಾನ ಮತ್ತು ಮತದ ಮಹತ್ವ ಕುರಿತಂತೆ ಜನಸಾಮಾನ್ಯರಲ್ಲಿ, ಅದರಲ್ಲೂ ಯುವ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕು.
– ಎಸ್‌.ಎಚ್. ಕೋರಡ್ಡಿ, ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.