ಬಾಗೇಪಲ್ಲಿ: ಬಯಲುಸೀಮೆ ಜಿಲ್ಲೆಗಳಿಗೆ ಶುದ್ಧ ನೀರು ಕಲ್ಪಿಸುವ ಭರವಸೆ ನೀಡಿದ ಕೇಂದ್ರ ಸಚಿವ ವೀರಪ್ಪಮೊಯಿಲಿ, ಎತ್ತಿನಹೊಳೆ ಯೋಜನೆ ಜಾರಿ ನೆಪದಲ್ಲಿ ಜನತೆಯನ್ನು ತಪ್ಪು ದಾರಿಗೆ ಎಳೆಯುವ ಹುನ್ನಾರ ನಡೆಸಿದ್ದಾರೆ ಎಂದು ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲ್ಲೂಕು ಕಾರ್ಯದರ್ಶಿ ಎನ್.ಎಸ್.ಚಲಪತಿ ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದೆ. 10 ರಿಂದ 12 ಟಿಎಂಸಿ ನೀರನ್ನು ಒಂದೇ ಬಾರಿಗೆ ಮೇಲಕ್ಕೆತ್ತಲು ಪ್ರತಿ ತಿಂಗಳು ಕನಿಷ್ಠ 30 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಕಟ್ಟಬೇಕು ಎಂದರು.
1200 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಫ್ಲೋರೈಡ್ರಹಿತ ಕುಡಿಯುವ ನೀರು ಕಲ್ಪಿಸುವ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿದರು.
30 ವರ್ಷಗಳ ಕಾಲ ಅಧ್ಯಯನ ಮಾಡಿದ ಜಲತಜ್ಞ ಪರಮಶಿವಯ್ಯ ವರದಿ ಜಾರಿಗೆ ಈಗ ಸಮಿತಿಗಳನ್ನು ರಚಿಸಿರುವುದು ಖಂಡನಾರ್ಹ. 9 ಜಿಲ್ಲೆಗಳ ಅಳಿವು-ಉಳಿವಿಗಾಗಿ ಪರಮಶಿವಯ್ಯ ವರದಿ ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಜಿಲಕರಪಲ್ಲಿ ನಂಜಿರೆಡ್ಡಿ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷೆ ಸುಬ್ಬರತ್ನಮ್ಮ, ಜಿಲ್ಲಾ ಘಟಕದ ಉಪಾಧ್ಯಕ್ಷೆ ಶಶಿಕಲಾ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.