
ಗುಡಿಬಂಡೆ: ಕಿರಿದಾದ ರಸ್ತೆಯಲ್ಲಿ ಏದುತ್ತಾ– ಕುಲುಕುತ್ತಾ ಸಾಗುವ ಕಪ್ಪು ಆಪೆ ಆಟೊ. ಚಾಲಕನ ಅಕ್ಕಪಕ್ಕ, ಸೀಟ್ಗಳು ತುಂಬಿ– ಟಾಪ್ನ ರಾಡ್ ಹಿಡಿದು ಜೋಕಾಲಿ ಆಡುವ ಪ್ರಯಾಣಿಕರು. ಒಂದೊಂದು ತಿರುವು ಸಾಗಿದರೂ ಎದುರಿನಿಂದ ಯಾವುದೇ ವಾಹನ ಬಂದರೂ, ಹಿಂದಿದ್ದ ವಾಹನ ಓವರ್ ಟೇಕ್ ಮಾಡಿದರೂ ಆಟೊದಲ್ಲಿ ಹತ್ತಿದವರು ಎದೆಯ ಮೇಲೊಮ್ಮೆ ಕೈ ಇಟ್ಟು, ಬದುಕಿದೆಯಾ ಬಡಜೀವವೇ ಎಂದು ನಿಟ್ಟುಸಿರು ಬಿಡುತ್ತಾರೆ. ಇಂಥ ದೃಶ್ಯ ನೋಡಬೇಕಾದರೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಬರಬೇಕು.
 ಕಳೆದ ಫೆಬ್ರುವರಿಯಲ್ಲಿ ಬಂದಾರ್ಲಹಳ್ಳಿ ಕ್ರಾಸ್ ಬಳಿ ಆಪೆ ಆಟೊ ಉರುಳಿ ಓರ್ವ ಮಹಿಳೆ ಮೃತ ಪಟ್ಟು, ಹಲ ಪ್ರಯಾಣಿಕರು ಗಾಯಗೊಂಡಿದ್ದರು. ಇಂಥ ಘಟನೆ ಮರಕಳಿಸುವ ಸಾಧ್ಯತೆಯನ್ನು ಆಪೆ ಆಟೊಗಳು ಭಯ ಮೂಡಿಸುತ್ತಿವೆ.
 
 ತಾಲ್ಲೂಕಿನಲ್ಲಿ ಸಮರ್ಪಕ ಬಸ್ ಸೌಕರ್ಯದ ಕೊರತೆಯಿಂದ ಆಪೆ ಆಟೊಗಳ ಕಾರುಬಾರು ವಿಪರೀತವಾಗಿದೆ. ಶಿಸ್ತು, ಸಂಯಮವಿಲ್ಲದೆ ಆಟೊ ಓಡಿಸುತ್ತಿರುವುದರಿಂದ ಸಂಚಾರ ಮತ್ತು ಪ್ರಾಣಕ್ಕೂ ಕುತ್ತು ಬಂದಿದೆ. ಸಮಸ್ಯೆ ಬಗ್ಗೆ ಅರಿವಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಇಂದಿಗೂ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
 
 ಆಟೊ ಚಾಲಕರ ಸಂಘಗಳೇ ಶಿಸ್ತು ಸಂಯಮ, ಸಂಚಾರಿ ವ್ಯವಸ್ಥೆ ಕಾಪಾಡಿಕೊಂಡು ಹೋಗಬೇಕೆಂದು ಪೊಲೀಸರು ಅದೆಷ್ಟೋ ಬಾರಿ ಪಾಠ ಹೇಳಿದ್ದಾರೆ. ಬೆರಳೆಣಿಕೆಯಷ್ಟು ಆಟೊ ಚಾಲಕರು ಮಾತ್ರ ನೀತಿ ನಿಯಮ ಪಾಲಿಸುತ್ತಿದ್ದಾರೆ ಎನ್ನುವುದು ಸ್ಥಳೀಯ ಜನರ ಅಭಿಪ್ರಾಯ.
 
 ಬಸ್ ಕೊರತೆ: ಗಡಿ ಗ್ರಾಮಗಳಿಂದ ಪಟ್ಟಣಕ್ಕೆ ಹೋಗಬೇಕೆದರೆ ನಿರ್ದಿಷ್ಟ ಸಮಯಕ್ಕೆ ಬಸ್ ಬರುವುದಿಲ್ಲ. ಇದರಿಂದ ಜನತೆ ಬಸ್ಗೆ ಕಾಯುವ ಬದಲು ಆಟೊಗಳ ಮೊರೆ ಹೋಗುತ್ತಿದ್ದಾರೆ.
 
 ಬಸ್ಗಳ ಸಂಚಾರ  ಸರಿಯಾಗಿದ್ದರೆ ಪ್ರಯಾಣಿಕರು ಆಟೊಗಳ ಕಡೆ ಹೋಗುವುದಿಲ್ಲ. ಬಸ್ ಸಂಚಾರ ಕಡಿತಕ್ಕೆ ಆಟೊ ಮಾಲೀಕರ ಲಾಬಿಯೂ ಕಾರಣ. ಸಾರಿಗೆ ಇಲಾಖೆಗೆ ಪ್ರತಿನಿತ್ಯ ಈ ಆಪೆ ಆಟೊಗಳಿಂದ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದರೂ ಸಾರಿಗೆ ಇಲಾಖೆ ಮೌನ ವಹಿಸಿದೆ ಎನ್ನುವುದು ಸಾರಿಗೆ ನಿಗಮ ನೌಕರರೊಬ್ಬರ ಆರೋಪ.
 
 ಆಟೊಗಳಲ್ಲಿ ಸಂಚರಿಸುವಾಗ ಕಿವಿಗಡಚಿಕ್ಕುವ ಹಾಡುಗಳನ್ನು ಹಾಕುತ್ತಾರೆ. ಮೀತಿ ಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಇಂಡಿಕೇಟರ್, ಹೆಡ್ಲೈಟ್ ಸರಿಯಾಗಿರುವುದಿಲ್ಲ.  ಸಮವಸ್ತ್ರ ಧರಿಸುವುದು ಬೆರಳಿಣಿಕೆಯಷ್ಟು ಮಂದಿ ಮಾತ್ರ ಎನ್ನುತ್ತಾರೆ ಪ್ರಯಾಣಿಕರು.
 
 ಇದು ತಪ್ಪು: ಕಾನೂನು ಪ್ರಕಾರ ವಾಗಿ ಆಟೊಗಳಲ್ಲಿ 4,-5 ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕು. ಉಲ್ಲಂಘಿಸಿದವರ ವಿರುದ್ಧ ಹಲವು ಬಾರಿ ದಂಡವನ್ನು ವಿಧಿಸಿದ್ದೇವೆ. ದಂಡ ಹಾಕಿದಾಗ ಮಾತ್ರ ಕಣ್ಣೀರಿಡುತ್ತಾರೆ. ಇದು ನಿಲ್ಲಬೇಕಾದರೆ ಸ್ವಯಂ ಜಾಗೃತಿ ಮೂಡಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.